ಬೇಸಿಗೆ ಕಳೆದು ಮಳೆಗಾಲ ಬಂದರೂ ಶಿರಾಡಿ ಘಾಟ್ ರಸ್ತೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಕಲೇಶಪುರದ ಮಾರನಹಳ್ಳಿ ಗೇಟ್ನಿಂದ ಗುಂಡ್ಯ ಗೇಟ್ವರೆಗಿನ ಕಾಮಗಾರಿ ನಡೆಯುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಚಿವರು ಜೂನ್ ಒಂದಕ್ಕೆ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹೇಳಿದ್ದ ಮಾತನ್ನು ಉಳಿಸಿಕೊಂಡಿಲ್ಲ. ಇದರಿಂದ ಸುತ್ತಮುತ್ತಲಿನ ಜನರು, ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಿದೆ.
ವಿಪರ್ಯಾಸವೆಂದರೆ, ಇನ್ನೂ ಮೊದಲನೇ ಹಂತದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಒಟ್ಟು 38 ಕಿ.ಮೀ. ಉದ್ದದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಮೊದಲನೇ ಹಂತದ ಕಾಮಗಾರಿಯಲ್ಲಿ ಈವರೆಗೆ ಬಲಬದಿಯ 9 ಕಿ.ಮೀ. ಹಾಗೂ ಎಡಬದಿಯ 6 ಕಿ.ಮೀ.ನಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ.
ಇನ್ನೂ ಉಳಿದಿರುವ 10 ಕಿ.ಮೀ. ಕಾಮಗಾರಿಯನ್ನು ಮುಗಿಸುವುದೆಂದು? ಇದೀಗ ಮಳೆಗಾಲ ಆರಂಭವಾಗಿದೆ. ಕಾಮಗಾರಿ ಕುಂಟುತ್ತಾ ಸಾಗಿದೆ. ಇದು ಮುಗಿಯಲು ಇನ್ನೂ ಅನೇಕ ತಿಂಗಳೇ ಬೇಕಾಗಬಹುದು. ದುರಸ್ತಿ ನಿಮಿತ್ತ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಆದರೂ ವಿಶೇಷ ರೈಲುಗಳ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿಲ್ಲ. ಈ ಬಗ್ಗೆ ಹೈಕೋರ್ಟ್ ಪ್ರಶ್ನಿಸಿರುವುದು ಸ್ವಾಗತಾರ್ಹ. ಜನ ಹೋರಾಟಕ್ಕಿಳಿಯುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು.