ಲೋಕಾಯುಕ್ತ ಸಂಸ್ಥೆಯಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆಗೆ ಆದೇಶಿಸುವಂತೆ ಲೋಕಾಯುಕ್ತರು ಸರ್ಕಾರವನ್ನು ಕೋರಲಿದ್ದಾರಂತೆ. ಇದು ಕೆಲವು ಮಾಧ್ಯಮಗಳಿಂದ ಗೊತ್ತಾದ ಸಂಗತಿ. ಇಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟ ಮಾಡಿಕೊಳ್ಳೋಣ.
ಆರೋಪ ಕೇಳಿಬಂದಿರುವುದು ಲೋಕಾಯುಕ್ತ ಸಂಸ್ಥೆಯ ವಿರುದ್ಧ. ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾದ ವರದಿಯೊಂದು, ‘ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಬಳಿ ₹ 1 ಕೋಟಿ ಲಂಚ ಕೊಡುವಂತೆ ಲೋಕಾಯುಕ್ತರ ಅಧಿಕೃತ ನಿವಾಸದಲ್ಲೇ ಕೇಳಲಾಯಿತು’ ಎಂದು ಹೇಳಿದೆ.
ಲೋಕಾಯುಕ್ತ ಸಂಸ್ಥೆ ಮತ್ತು ಲೋಕಾಯುಕ್ತರ ಅಧಿಕೃತ ನಿವಾಸದಲ್ಲಿ ನಡೆಯುವ ವಿದ್ಯಮಾನಗಳು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಅವರ ಗಮನಕ್ಕೆ ಬರುತ್ತವೆ, ಅಲ್ಲವೇ? ಅವರದೇ ಸಂಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸಲಾರದ ಸ್ಥಿತಿ ಬಂತೇ?
ತಮ್ಮ ವಿರುದ್ಧ ಆರೋಪ ಬಂದಾಗ ತಾವು ಹೊಂದಿರುವ ಸ್ಥಾನಕ್ಕೆ ರಾಜೀನಾಮೆ ನೀಡುವ ಸತ್ಸಂಪ್ರದಾಯವನ್ನು ಸಾರ್ವಜನಿಕ ಬದುಕಿನಲ್ಲಿರುವ ಬಹುಪಾಲು ಜನ ಈಗ ಪಾಲಿಸುತ್ತಿಲ್ಲ. ಆದರೆ ನ್ಯಾಯಮೂರ್ತಿ ರಾವ್ ಅವರು ಹಾಗೆ ಮಾಡುವುದು ಬೇಡ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆಯೊಂದಕ್ಕೆ ಅನುವು ಮಾಡಿಕೊಡಲಿ.