ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಹೆಜ್ಜೆಗಳನ್ನು ಇಟ್ಟಿರುವುದು ನಿಜಕ್ಕೂ ಸಂತಸ ತರುವಂತಹದ್ದು. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಜನತೆ ತಲೆ ತಗ್ಗಿಸುವ ಮಟ್ಟಕ್ಕೆ ಭ್ರಷ್ಟಾಚಾರ ತಲುಪಿತ್ತು. ಇದನ್ನು ನಿಯಂತ್ರಿಸುವ ಸಲುವಾಗಿ ಮುಖ್ಯ ಮಂತ್ರಿಯವರು ತಳೆದಿರುವ ನಿಲುವು ಸ್ವಾಗತಾರ್ಹ.
ನಿರುದ್ಯೋಗಿಗಳು ತಮ್ಮ ಕನಸುಗಳನ್ನು ನನಸಾಗಿಸಿ ಕೊಳ್ಳಲು ಕರ್ನಾಟಕ ಲೋಕ ಸೇವಾ ಆಯೋಗವನ್ನು ಆಶ್ರಯಿಸುವುದು ಸಹಜ. ಮೀಸಲಾತಿಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಬೇಕಾಗಿದ್ದರೂ, ಆಯಾ ವರ್ಗದಲ್ಲಿನ ಪ್ರತಿಭಾನ್ವಿತರಿಗೆ ಅನ್ಯಾಯವಾಗ ದಂತೆ ನಿಗಾ ವಹಿಸುವುದು ಆಯೋಗದ ಜವಾಬ್ದಾರಿ.
ನಾವೆಲ್ಲರೂ ನೇಮಕಾತಿ ಪಡೆದುಕೊಳ್ಳುವಾಗ ಆಯೋಗವನ್ನು ನ್ಯಾಯದೇಗುಲದಷ್ಟೇ ಪವಿತ್ರವೆಂದು ಭಾವಿಸಿ, ಅಷ್ಟೇ ಗೌರವದಿಂದ ಕಾಣುತ್ತಿದ್ದ ದಿನಗಳು ಹಿಂದಿನವು. ಆದರೆ ಇತ್ತೀಚೆಗೆ ಪ್ರತಿ ನೇಮಕಾತಿಯ್ಲ್ಲಲೂ ಒಂದಲ್ಲ ಒಂದು ಹಗರಣ, ಉದ್ಯೋಗಾಂಕ್ಷಿಗಳ ಟೀಕೆ ಗಳಿಗೆ ಒಳಗಾಗುತ್ತಿರುವ ಆಯೋಗಕ್ಕೆ ಕಾಯಕಲ್ಪದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಆಯೋಗದ ಅವ್ಯವಹಾರಗಳ ಬಗ್ಗೆ ಸಿಐಡಿ ಮೂಲಕ ತನಿಖೆ ನಡೆಸಲು ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ.
-ವೈ.ಕೆ. ಮುದ್ದುಕೃಷ್ಣ, ಬೆಂಗಳೂರು.