ರೈತರು ಪ್ರತಿನಿತ್ಯ ಎಲ್ಲೋ ಒಂದು ಕಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಹತಾಶರಾದ ಬೇರೆ ಬೇರೆ ವಯೋಮಾನದ, ವೃತ್ತಿಯ ಕೆಲವರು ತಮ್ಮ ಕೈಯಾರೆ ಬದುಕು ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಅದು ಅಪರಾಧ. ನೋವಿನ ಸಂಗತಿ. ಅಂತಹ ಮನಸ್ಥಿತಿ ಬದಲಾಯಿಸಲು ನಾವು ಪ್ರಯತ್ನಿಸಬೇಕು.
ಬದುಕು ಎಲ್ಲರಿಗೂ ಸಹನೀಯವಾಗಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ದುಃಖಿತರೇ. ಆದರೆ ಸಾವೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಆದರೆ ನಮ್ಮಲ್ಲಿ ಅಧಿಕಾರಿಗಳು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ವಿಶೇಷ ಕಿಮ್ಮತ್ತು ಬಂದುಬಿಡುತ್ತದೆ. ಅಧಿಕಾರಿಯೊಬ್ಬರ ಆತ್ಮಹತ್ಯೆಗೆ ಈ ಮಟ್ಟದ ಪ್ರತಿಭಟನೆ ಏಕೆ, ಅಧಿಕಾರಿಯ ಸಾವಿಗೆ ಮಾತ್ರ ಬೆಲೆಯೇ, ಇಲ್ಲವೇ ಸಾವು ಸಹ ಕೆಲವರಿಗೆ ಬಂಡವಾಳವಾಗಿದೆಯೇ?
ಡಿವೈಎಸ್ಪಿ ಕಲ್ಲಪ್ಪ ಅವರ ಸಾವಿಗೆ ಇದೇ ರೀತಿ ಸ್ಪಂದಿಸದವರು, ಮತ್ತೊಬ್ಬ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಮಾತ್ರ ಏಕೆ ಇಷ್ಟೊಂದು ಪ್ರಾಮುಖ್ಯ ಕೊಡುತ್ತಿದ್ದಾರೆ? ಆತ್ಮಹತ್ಯೆ ಮಾಡಿಕೊಂಡವರ ವ್ಯಕ್ತಿತ್ವವನ್ನು ನೈಜ ಸ್ಥಿತಿಗಿಂತ ಹೆಚ್ಚು ವೈಭವೀಕರಿಸುವುದು ಎಷ್ಟು ಸರಿ? ಮುಗ್ಧ ಮಕ್ಕಳನ್ನು ಗದಗದಲ್ಲಿ ಮೆರವಣಿಗೆಗೆ ಬಳಸಿದ್ದು ತಪ್ಪಲ್ಲವೇ? ಜೀವನ ಎದುರಿಸಲಾಗದೆ ಬದುಕು ಕೊನೆಗೊಳಿಸಿಕೊಂಡ ಇಂಥ ವ್ಯಕ್ತಿಗಳು, ಮಕ್ಕಳಿಗೆ ಯಾವ ರೀತಿ ಮಾದರಿ ಆಗಬಲ್ಲರು?