ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿನ ಒಂದು ಅಂಶದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿರುವಂತೆ ಕಾಣುತ್ತಿಲ್ಲ. ಜೇಟ್ಲಿ ಅವರು ಈ ಬಾರಿಯ ಬಜೆಟ್ನಲ್ಲಿ ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ ನೀಡಿರುವುದನ್ನು ನಾವು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿಲ್ಲ.
ಕಿಸಾನ್ ವಿಕಾಸ ಪತ್ರಗಳನ್ನು ಪುನಃ ಜಾರಿಗೆ ತರಲಾಗುವುದು ಎಂದಿದ್ದಾರೆ ಜೇಟ್ಲಿ. ಅಲ್ಲದೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಹೂಡಿಕೆ ಮಿತಿಯನ್ನು ₨ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ, ₨ 1.50 ಲಕ್ಷದವರೆಗಿನ ಉಳಿತಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದ್ದಾರೆ. ಸಣ್ಣ ಉಳಿತಾಯಕ್ಕೆ ಕೇಂದ್ರ ಈಗ ನೀಡಿರುವ ಉತ್ತೇಜನ ದೇಶಕ್ಕೆ ಖಂಡಿತ ‘ಒಳ್ಳೆಯ ದಿನ’ ತರಲಿದೆ.
2007–08ರಲ್ಲಿ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಶೇಕಡ 36ರಷ್ಟು ಒಟ್ಟು ಆಂತರಿಕ ಉಳಿತಾಯದ (ಜಿಡಿಎಸ್) ಬಾಬ್ತಿಗೆ ಹೋಗುತ್ತಿತ್ತು. ಇದು 2012–13ರಲ್ಲಿ ಶೇ 30.1ರಷ್ಟಕ್ಕೆ ಕುಸಿಯಿತು. ‘ಆಂತರಿಕ ಉಳಿತಾಯ ಹೀಗೆ ಕುಸಿಯುತ್ತ ಸಾಗಿದರೆ ಎಲ್ಲ ಬಗೆಯ ಹೂಡಿಕೆಗಳಿಗೂ ವಿದೇಶಿ ಮೂಲದತ್ತ ಮುಖ ಮಾಡಬೇಕಾಗುತ್ತದೆ. ಉಳಿತಾಯದ ಪ್ರಮಾಣವನ್ನು ಹೆಚ್ಚಿಸಲೇಬೇಕು’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಎಚ್ಚರಿಸಿತ್ತು.
ನಮ್ಮ ದೇಶದ ಜನರಲ್ಲಿ, ವಿಶೇಷವಾಗಿ ಗೃಹಿಣಿಯರಲ್ಲಿ, ಉಳಿತಾಯ ಮಾಡುವ ಮನೋಭಾವ ಇದೆ. ಆದರೆ ಕೊಳ್ಳುಬಾಕ ಸಂಸ್ಕೃತಿ, ಮಾಸಿಕ ಕಂತು (ಇಎಂಐ) ಸಂಸ್ಕೃತಿಯ ಮೆರುಗಿನಲ್ಲಿ ಉಳಿತಾಯ ಸಂಸ್ಕೃತಿ ತುಸು ಮಾಸಿದಂತೆ ಕಾಣುತ್ತದೆ. ಕೇಂದ್ರ ಈಗ ನೀಡಿರುವ ಉತ್ತೇಜನ, ದೇಶದ ಆರ್ಥಿಕತೆಗೆ ಒಳ್ಳೆಯ ದಿಕ್ಕು ನೀಡಲಿದೆ. ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿದರೂ, ಸಣ್ಣ ಉಳಿತಾಯಗಳು ನಮ್ಮ ಕೈಹಿಡಿಯುತ್ತವೆ.
ಸಣ್ಣ ಉಳಿತಾಯದ ಮೂಲಕ ‘ಒಳ್ಳೆಯ ದಿನ’ಗಳನ್ನು ನಾವೇ ತಂದುಕೊಳ್ಳಬಹುದು. ಜನ ಉಳಿಸಿದ ಹಣವನ್ನು ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಬಜೆಟ್ ಅಂದರೆ, ಇರುವ ಒಂದು ರೂಪಾಯಿಯನ್ನು ಹಂಚುವುದು ಮಾತ್ರವಲ್ಲ. ಅದರಲ್ಲಿ ತುಸು ಮೊತ್ತವನ್ನು ಉಳಿಸುವುದೂ ಸೇರಿದೆ. ಅದಕ್ಕೆ ಇಂಬು ಕೊಟ್ಟು ಜೇಟ್ಲಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.