ಭಾರತದ ನೆಲ ಸಕಲ ಧರ್ಮಾನುಯಾಯಿಗಳಿಗೂ ಸಮಾನ ಹಕ್ಕು, ಸ್ಥಾನಮಾನ, ಗೌರವಗಳನ್ನು ತನ್ನ ಸಂವಿಧಾನದಲ್ಲೇ ಕಲ್ಪಿಸಿಕೊಟ್ಟಿದೆ. ಆದ ಕಾರಣವೇ ಈ ದೇಶ, ಸರ್ವಧರ್ಮಗಳ ಶಾಂತಿಯ ತೋಟ. ಉಂಡ ಮನೆಗೆ ಎರಡು ಬಗೆವ ಕೆಲ ವ್ಯಕ್ತಿಗಳು ಅಸಹಿಷ್ಣುತೆಯ ನೆಪದಲ್ಲಿ ಕಿರಿಕಿರಿ ಉಂಟು ಮಾಡಿ ದೇಶದ ಘನತೆಗೆ ಕುಂದು ತರುವ ಪ್ರಯತ್ನ ನಡೆಸಿರುವುದು ದುರದೃಷ್ಟಕರ.
ಅಸಹಿಷ್ಣುತೆಯ ಭೂತ ದೇಶವನ್ನು ಕೆಲಮಟ್ಟಿಗೆ ಕಾಡಿಸಿ–ಪೀಡಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಿದ್ದು ನಿರಾಕರಿಸಲಾಗದ ಸತ್ಯ. ಕಸ್ತೂರಿಯನ್ನು ಎಂದಿಗೂ ಬಚ್ಚಿಡಲಾಗದು. ಸತ್ಯವನ್ನು ಎಂದಿಗೂ ಮುಚ್ಚಿಡಲಾಗದು. ನಿಜವನ್ನು ನಿರಾಕರಿಸುವುದೆಂದರೆ ಇಲಿಯನ್ನು ಚೀಲದೊಳಗಿರಿಸಿ ಹೊಲಿಗೆ ಹಾಕಿದಂತೆಯೇ ಸೈ. ಭಾರತೀಯರ ಹೃದಯ ವೈಶಾಲ್ಯ, ಸಂಸ್ಕೃತಿ, ಔದಾರ್ಯಗಳನ್ನು ಒಪ್ಪಿ, ಭಾರತೀಯನಾಗಿ ಬಾಳಲು ಭಾರತಕ್ಕೆ ಬಂದಿಳಿದ ಪಾಕಿಸ್ತಾನದ ಪ್ರಸಿದ್ಧ ಗಾಯಕ ಅದ್ನಾನ್ ಸಾಮಿ ಅವರ ನಡೆ, ನಿರ್ಧಾರವೇ ಅಸಹಿಷ್ಣುತೆ ವಾದದಲ್ಲಿ ಹುರುಳಿಲ್ಲ ಎಂಬ ಸತ್ಯವನ್ನು ಎತ್ತಿಹಿಡಿದಿದೆ. ಭಾರತ ಎಂದರೆ ಏನೆಂಬುದನ್ನು ಸಾರಿದೆ.