ಸಿಂಧೂ ನದಿ ನಾಗರಿಕತೆಯ ಕಾಲದಲ್ಲಿಯೇ ಅಚ್ಚುಕಟ್ಟಾದ ನಗರ ವ್ಯವಸ್ಥೆಗೆ ಹೆಸರಾಗಿದ್ದವರು ನಾವು.
ಜಗತ್ತಿನ ಯಾವ ನಾಗರಿಕತೆಯಲ್ಲೂ ಕಾಣಸಿಗದಂತಹ ಯೋಜನಾಬದ್ಧವಾದ ಚರಂಡಿ ವ್ಯವಸ್ಥೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಹೊಂದಿದ್ದ ಶ್ರೇಷ್ಠ ಇತಿಹಾಸ ನಮ್ಮದು. ಆ ನಾಗರಿಕತೆಯ ವಾರಸುದಾರರಾದ ನಾವು ಇಂದಿನ ಹಳ್ಳಿ, ಪಟ್ಟಣ, ನಗರಗಳನ್ನು ಹೇಗೆ ಕಟ್ಟುತ್ತಿದ್ದೇವೆ?
ಒಂದೇ ಒಂದು ಮಳೆಗೆ ನಮ್ಮ ಮಹಾ ನಗರಗಳಲ್ಲಿ ‘ಕೃತಕ ನೆರೆ’ ಸೃಷ್ಟಿಯಾಗಿ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ.
ನೀರು ಹರಿದು ಹೋಗಲು ಚರಂಡಿಗಳಿಲ್ಲದೆ, ಇದ್ದರೂ ವ್ಯವಸ್ಥಿತವಾಗಿ ಹರಿದು ಹೋಗಲು ಅವಕಾಶವಿಲ್ಲದ ಕಾರಣಕ್ಕೆ ರಸ್ತೆಗಳು ಜಲಾವೃತವಾಗುತ್ತವೆ.
ಒತ್ತುವರಿದಾರರ, ಪ್ರಭಾವಿಗಳ ಹಿತ ಕಾಪಾಡಲು ಚರಂಡಿ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸುವುದು ಅಥವಾ ದಾರಿಯನ್ನೇ ಬದಲಾಯಿಸುವುದು ನಡೆದೇ ಇದೆ. ಇದು ನಿಲ್ಲಬೇಕು.
ಸರ್ಕಾರ ಗಂಭೀರವಾಗಿ ಚಿಂತಿಸಿ, ತಜ್ಞರಿಂದ ಹಳ್ಳಿ, ಪಟ್ಟಣ, ನಗರಗಳಿಗೆ ಅನ್ವಯವಾಗುವಂತಹ ಸಮಗ್ರ ಮತ್ತು ವೈಜ್ಞಾನಿಕ ಚರಂಡಿ ವ್ಯವಸ್ಥೆಯನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು.