ರಾಜ್ಯ ಸರ್ಕಾರ ಇತ್ತೀಚೆಗೆ ಪದವಿಪೂರ್ವ ಉಪನ್ಯಾಸಕರ ನೇಮಕಾತಿಗೆ ಆದೇಶ ಹೊರಡಿಸಿದೆ. ಇದು ಸಾವಿರಾರು ಅಭ್ಯರ್ಥಿಗಳಿಗೆ ಸಂತಸ ಉಂಟು ಮಾಡಿದ್ದರೂ ಅಧಿಸೂಚನೆಯನ್ನು ಓದಿದವರಿಗೆ ಆಶಾಭಂಗವಾಗಿದೆ. ಏಕೆಂದರೆ ಎಲ್ಲ ವಿಷಯಗಳಿಗೂ ಸೇರಿ ಕೇವಲ 1,130 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶುಲ್ಕವಂತೂ ನಿರುದ್ಯೋಗಿ ಅಭ್ಯರ್ಥಿಗಳ ಆತ್ಮವಿಶ್ವಾಸವನ್ನೇ ಕುಗ್ಗಿಸುವಂತಿದೆ.
ಸಾಮಾನ್ಯ ವರ್ಗದವ ರಿಗೆ ₨ 2500, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ₨ 2000 ನಿಗದಿಪಡಿಸಲಾಗಿದೆ.
ಈಗಾಗಲೇ ಪದವಿ ಕಾಲೇಜು ಉಪನ್ಯಾಸಕರ ಹುದ್ದೆಗೆ (ಸಾಮಾನ್ಯ ಅಭ್ಯರ್ಥಿಗಳಿಗೆ ₨ 2500, ಪರಿಶಿಷ್ಟ ಜಾತಿ–ಪಂಗಡ ಅಭ್ಯರ್ಥಿಗಳಿಗೆ ₨ 2000) ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ (ವಿಷಯವೊಂದಕ್ಕೆ ಸಾಮಾನ್ಯರಿಗೆ ₨ 500, ಪರಿಶಿಷ್ಟ ಜಾತಿ–ಪಂಗಡದ ಅಭ್ಯರ್ಥಿಗಳಿಗೆ ₨ 250) ದುಬಾರಿ ಶುಲ್ಕ ಸಲ್ಲಿಸಿರುವ ಆಕಾಂಕ್ಷಿಗಳಿಗೆ ಪದವಿಪೂರ್ವ ಉಪನ್ಯಾಸಕರ ಹುದ್ದೆಯ ಪರಿಕ್ಷಾ ಶುಲ್ಕ ಹೊರೆಯೆನಿಸಿದೆ.
ಸರ್ಕಾರ, ಬೆರಳೆಣಿಕೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನಿರುದ್ಯೋಗಿಗಳಿಂದಲೇ ಹಣ ವಸೂಲಿ ಮಾಡಲು ಹೊರಟಂತೆ ತೋರುತ್ತದೆ. ಅಭ್ಯರ್ಥಿಗಳ ಆರ್ಥಿಕ, ಸಾಮಾಜಿಕ ಹಿಂದುಳಿದಿರುವಿಕೆಯ ಹಿನ್ನೆಲೆಯನ್ನು ಗಮನದಲ್ಲಿ ಇರಿಸಿ ಕೊಂಡು ದುಬಾರಿ ಶುಲ್ಕವನ್ನು ಕಡಿತ ಮಾಡಬೇಕು.