ಪಾಲಿಕೆ ಚುನಾವಣೆ ಮುಗಿದು ಹೊಸ ಸದಸ್ಯರು ಬಂದರೂ ಬೆಂಗಳೂರಿನ ಹಳೆಯ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಬದಲಾಗಿ ಅವು ಹೊಸ ವರಸೆ ತೋರುತ್ತಿವೆ. ಪ್ರಕಾಶ ನಗರ ಹಾಗೂ ಶೇಷಾದ್ರಿಪುರ ಮತ್ತು ಕನ್ನಿಂಗ್ಹ್ಯಾಮ್ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಬೇಕಾಬಿಟ್ಟಿ ರಸ್ತೆ ಅಗೆಯುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಮಂತ್ರಿ ಮಾಲ್ನಿಂದ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿದರೆ ಸಾಕು, ಶ್ರೀರಾಮಪುರ ಮುಖ್ಯರಸ್ತೆಯಿಂದ ಮುಂದೆ ಹೋದಂತೆಲ್ಲ ಈ ಅವಾಂತರ ಹೆಜ್ಜೆ ಹೆಜ್ಜೆಗೂ ದರ್ಶನವಾಗುತ್ತ ಹೋಗುತ್ತದೆ. ಸುಮಾರು ಎರಡು ತಿಂಗಳಿಂದ ಹೀಗೆ ರಸ್ತೆ ಅಗೆಯುವುದು, ಅದನ್ನು ಹಾಗೆಯೇ ಬಿಡುವುದು ಮತ್ತೆ ಮುಂದಿನ ರಸ್ತೆಯನ್ನು ಅಗೆಯಲು ಹೋಗುವುದು ನಡೆದೇ ಇದೆ. ಕೆಲವು ಕಡೆ ಅಗೆದ ರಸ್ತೆಯನ್ನು ಸುಮ್ಮನೇ ನೆಪ ಮಾತ್ರಕ್ಕೆ ಮಣ್ಣಿನಿಂದ ಮುಚ್ಚಿ ಬಿಡುತ್ತಾರೆ.
ನಗರಪಾಲಿಕೆಯ ಚುನಾವಣೆಗೂ ಮುನ್ನವೇ ಆರಂಭವಾಗಿರುವ ಈ ರಸ್ತೆ ಅಗೆತದ ಬಗ್ಗೆ ನಗರಸಭೆಯ ಸದಸ್ಯರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜನರು ಮಾತ್ರ ಹಲವು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ರಸ್ತೆಯನ್ನು ಅಗೆದು ಬಿಟ್ಟು ಹೋದ ಪರಿಣಾಮ ರಸ್ತೆ ಬದಿಯ ಮನೆ ಮಂದಿಯ ತೊಂದರೆಗೆ ಕಾರಣವಾಗಿದೆ. ವಾಹನವನ್ನು ಮನೆಯ ಗೇಟ್ವರೆಗೆ ತೆಗೆದುಕೊಂಡು ಹೋಗಲು ಆಗದೇ ರಸ್ತೆ ಮೇಲೆಯೇ ಬಿಟ್ಟು ಹೋಗುವಂತಾಗಿದೆ.
ವಯೋವೃದ್ಧರು–ಮಕ್ಕಳು, ಗರ್ಭಿಣಿಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತಿದೆ. ಅಲ್ಲದೇ, ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದೆಲ್ಲ ಯಾವಾಗ ಮುಗಿಯುತ್ತದೆ, ಏನು ಕೆಲಸ ನಡೆಯುತ್ತಿದೆ ಎನ್ನುವ ಮಾಹಿತಿಯೂ ಇಲ್ಲ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಆದರೆ ಅದನ್ನು ಅವರು ಮರೆತಿದ್ದಾರೆ.
ಕೆಲಸ ಮುಗಿದ ಮೇಲೆ ಅದನ್ನು ಸರಿಯಾಗಿ ಮುಚ್ಚಿ ಎಂದರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಕೆಲಸ ಮುಗಿದಾಗ ಅದರ ಮೇಲೆ ಬೇಕಾ ಬಿಟ್ಟಿ ಮಣ್ಣು ಮುಚ್ಚಿ ಹೋಗುತ್ತಾರೆ. ಮಳೆ ಬಂದಾಗ ಅದು ಕೆಸರಾಗಿ ಅವಘಡಗಳಿಗೆ ಕಾರಣವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಮ್ಮ ಘನ ಕೆಲಸ ಮುಗಿದ ಮೇಲೆ ಈ ಠಾರು ರಸ್ತೆಯನ್ನು ಮೊದಲಿನಂತೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.