ಹದಿನಾಲ್ಕು ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪವು ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಗಳಲ್ಲಿ ಇತ್ತು. ಆದರೆ ಬೆಳಗಾವಿ, ವಿಜಯಪುರ ಜಿಲ್ಲೆಗಳ ಜನರ ಬಹುದಿನದ ಬೇಡಿಕೆಯಾದ ಸಂಕೇಶ್ವರ ಮತ್ತು ವಿಜಯಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ 12ನ್ನು ಮೇಲ್ದರ್ಜೆಗೇರಿಸುವ ಯಾವುದೇ ಪ್ರಸ್ತಾಪ ಇರದಿದ್ದನ್ನು ನೋಡಿ ವಿಷಾದವಾಯಿತು.
ಇದು ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವುದರ ಜೊತೆಗೆ ಬೆಳಗಾವಿಯಿಂದ ಸಂಕೇಶ್ವರ, ಚಿಕ್ಕೋಡಿ, ಅಥಣಿಯನ್ನು ವಿಜಯಪುರಕ್ಕೆ ಸೇರಿಸುವ ಪ್ರಮುಖ ರಸ್ತೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಎರಡು ರಾಜ್ಯಗಳ ಜನರೂ ಇದೇ ರಸ್ತೆಯನ್ನು ಆಶ್ರಯಿಸುತ್ತಾರೆ. ಬೆಳಗಾವಿ ಜಿಲ್ಲೆಯು ರಾಜ್ಯದ ಸಕ್ಕರೆ ಕಣಜವಾಗಿದ್ದು, ರಸ್ತೆಯ ಸುತ್ತಮುತ್ತ 10ಕ್ಕಿಂತ ಅಧಿಕ ಸಕ್ಕರೆ ಕಾರ್ಖಾನೆಗಳಿವೆ.
ಪ್ರಸ್ತುತ ಇರುವ ರಸ್ತೆ ಅತಿ ಕಿರಿದಾಗಿದೆ. ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಸಂಕೇಶ್ವರದ ಹತ್ತಿರ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು ವಿಜಯಪುರದ ರಾಷ್ಟ್ರೀಯ ಹೆದ್ದಾರಿ 13ನ್ನು ಕೂಡಿಸುವ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು.