‘ಶೌರ್ಯ ಮೆರೆದ ಸುದ್ದಿ ಅಲ್ಲಗಳೆದ ವಿದ್ಯಾರ್ಥಿನಿ’ (ಪ್ರ.ವಾ., ಆ. 21) ಸುದ್ದಿ ಓದಿ ನಿಜಕ್ಕೂ ಹೆಮ್ಮೆ ಎನಿಸಿತು. ಭಾರತದ ಭಾವೀ ಪ್ರಜೆ ಹೇಗಿರಬೇಕು ಎಂಬುದಕ್ಕೆ ಈಕೆ ಮಾದರಿಯಾಗಿದ್ದಾಳೆ. ಪ್ರಶಸ್ತಿಗಳಿಗಾಗಿ ಅರ್ಜಿ ಗುಜರಾಯಿಸಿಕೊಂಡು, ಅದನ್ನು ಗಿಟ್ಟಿಸಿಕೊಳ್ಳಲು ಲಾಬಿ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹೇಗೋ ಮಾಡಿ ಪ್ರಶಸ್ತಿ ಪಡೆದು ಮೆರೆಯುವ ಜನರೇ ಈಗ ಹೆಚ್ಚಾಗಿದ್ದಾರೆ. ಅಂತಹುದರಲ್ಲಿ, ಅಧಿಕಾರಿಗಳು ಮನೆ ಬಾಗಿಲಿಗೇ ಬಂದು ಶಿಫಾರಸು ಮಾಡಲು ಮುಂದಾದಾಗ ವಸ್ತುಸ್ಥಿತಿಯನ್ನು ವಿವರಿಸಿ ಪ್ರಶಸ್ತಿ ನಿರಾಕರಿಸಿದ ಆಕೆಯ ಸತ್ಯಸಂಧತೆಯನ್ನು ಎಷ್ಟು ಕೊಂಡಾಡಿದರೂ ಸಾಲದು.
ಆಕೆಯೇ ವಿನಂತಿಸಿರುವಂತೆ, ಮುಖ್ಯಮಂತ್ರಿ ಅವಳ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಲು ಸಹಾಯ ಮಾಡಿದರೆ ಅದೇ ಅವರು ಕೊಡುವ ನಿಜವಾದ ಪ್ರಶಸ್ತಿ.