‘ಜಾಮೀನು ಸಿಕ್ಕ ಕೂಡಲೇ ಆರೋಗ್ಯವಂತ!’ (ಪ್ರ.ವಾ., ನ. 2) ಎಂಬ ವರದಿಯನ್ನೋದಿ ಯಾವ ಭಾರತೀಯನಿಗೂ ಆಶ್ಚರ್ಯವಾಗಿರಲಿಕ್ಕಿಲ್ಲ. ಇಂದಿನ ರಾಜಕಾರಣಿಗಳು ಬದುಕುತ್ತಿರುವುದು ಹಾಗೆ. ಹಗರಣಗಳಲ್ಲಿ ಭಾಗಿಯಾಗುವಾಗ ಆರೋಗ್ಯವಂತರಾಗಿರುವ ಇವರು, ಜೈಲು ಸೇರುವಾಗ ಮಾತ್ರ ಎದೆನೋವು, ಸುಸ್ತು, ತಲೆಸುತ್ತು, ರಕ್ತದೊತ್ತಡ ಇತ್ಯಾದಿ ರೋಗ ಲಕ್ಷಣಗಳನ್ನು ಹೇಳಿ ವೈದ್ಯರನ್ನು ಕಂಗಾಲು ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ. ಕಳೆದ ಆರೇಳು ವರ್ಷಗಳ ಕರ್ನಾಟಕದ ಇತಿಹಾಸದಲ್ಲಿ ಇಂತಹ ಅನೇಕ ಪ್ರಕರಣಗಳಿವೆ.
ಜಿಲ್ಲಾಮಟ್ಟದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೊಲೆಯ ಆಪಾದಿತನೊಬ್ಬ ಹಣ ಹಾಗೂ ಪ್ರಭಾವವನ್ನು ಬಳಸಿ ‘ಇವರಿಗೆ ಎದೆ ನೋವು ಬಂದಾಗಲೆಲ್ಲ ಆಸ್ಪತ್ರೆಗೆ ದಾಖಲು ಮಾಡುವುದು’ ಎಂಬ ಪ್ರಮಾಣ ಪತ್ರವನ್ನು ಬೆಂಗಳೂರಿನ ಹಿರಿಯ ವೈದ್ಯರೊಬ್ಬರಿಂದ ಪಡೆದು, ವಕೀಲರ ಸಹಾಯದಿಂದ ವಿಚಾರಣೆಯನ್ನು ಕೆಲವು ವರ್ಷ ಮುಂದೆ ಹೋಗುವಂತೆ ನೋಡಿಕೊಂಡನು. ನಿರಪರಾಧಿ ಎಂದು ಘೋಷಣೆಯಾದ ಬಳಿಕ ತನ್ನ ಕೃತ್ಯವನ್ನು ಮುಂದುವರಿಸಿದನು. ಇತರ ವೈದ್ಯರ ಅನುಭವದಲ್ಲಿ ಇಂತಹ ನೂರಾರು ಪ್ರಕರಣಗಳು ಇರಬಹುದು!