‘ಕೋಲೆಬಸವ ಆಗಿರಬೇಕೇ ಲೋಕಾಯುಕ್ತ?’ ಲೇಖನ (ನಾಲ್ಕನೇ ಆಯಾಮ– ಪದ್ಮರಾಜ ದಂಡಾವತಿ, ಜ. 17) ರಾಜ್ಯದ ಪ್ರಜ್ಞಾವಂತರ ತೊಳಲಾಟಕ್ಕೆ ಹಿಡಿದ ಕೈಗನ್ನಡಿ.
ಎಲ್ಲಿಂದ ಎಲ್ಲಿಗೆ ಬಂದಿದೆ ಪ್ರಜಾಪ್ರಭುತ್ವ? ಅಧಿಕಾರ ಬೇಕು, ಜವಾಬ್ದಾರಿ ಬೇಡ. ಆ ಮೇರೆಯನ್ನೂ ಮೀರಿ ಈಗ ಆಡಳಿತ ನಡೆಸುವವರನ್ನು ಯಾರೂ ಪ್ರಶ್ನಿಸುವಂತಿರಬಾರದೆಂಬ ಹಂತಕ್ಕೇರುವುದು ಸಾಮಾನ್ಯ ಸಾಧನೆಯೇ? ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಒಂದೇ ಎರಡೇ? ಬೆಲೆ ಏರಿಕೆ, ಜನಸಾಮಾನ್ಯರ ಬವಣೆ, ರೈತರ ಆತ್ಮಹತ್ಯೆ, ಬೆಳೆಯ ಬೆಲೆ ಇಳಿಕೆ ಕೇಳುವವರು ಯಾರು?ಮಾತೆತ್ತಿದರೆ ಶ್ರೀಸಾಮಾನ್ಯನ ಉದ್ಧಾರದ ಘೋಷಣೆ. ಆದರೆ ಅದೇ ಜನಸಾಮಾನ್ಯರು ಹಾದಿ ಬೀದಿಯಲ್ಲಿ ನಿಟ್ಟುಸಿರುಗರೆಯುತ್ತಾ ‘ಜೆಡಿಎಸ್, ಬಿಜೆಪಿ ಆಳ್ವಿಕೆಯ ಬಾಣಲೆಯಿಂದ ಕಾಂಗ್ರೆಸ್ ಆಳ್ವಿಕೆಯ ಬೆಂಕಿಗೆ ಬಿದ್ದಿದ್ದೇವೆ’ ಎಂದು ಹೇಳುವಂತಾಗಿದೆ.
ಯಾವ ಅನುಮಾನವೂ ಬೇಡ. ಕೋಲೆಬಸವ ಆಗಿರಬೇಕಾದ ಲೋಕಾಯುಕ್ತರೇ ಬೇಕು! ಆಡಳಿತ ನಡೆಸುವವರಿಗೆ ಮಾತ್ರವಲ್ಲ, ವಿರೋಧ ಪಕ್ಷದವರಿಗೂ ಅಂತಹವರೇ ಸೂಕ್ತ, ಅತ್ಯಗತ್ಯ. ಒಟ್ಟಿನಲ್ಲಿ ಅಧಿಕಾರದಲ್ಲಿರುವವರು, ರಾಜಕಾರಣಿಗಳಿಗೆ ತಿಪ್ಪೆ ಸಾರಿಸುವ ‘ಕೋಲೆಬಸವ ಲೋಕಾಯುಕ್ತ’ರ ಜರೂರಿದೆ.