ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಶಾಂತನ್, ಪೇರರಿವಾಳನ್, ಮುರುಗನ್ ಅವರ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ.
ಈಗಾಗಲೇ ೨೨ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿರುವ ಇವರು ಮರಣದಂಡನೆಗಿಂತ ಹೆಚ್ಚು ಶಿಕ್ಷೆಯನ್ನು ಅನುಭವಿಸಿದ್ದಾರೆ. ಈ ಮೂವರು ಕಾರಾಗೃಹದಲ್ಲಿದ್ದು ಕೊಂಡೇ ಅಂಚೆ ಶಿಕ್ಷಣದ ಮೂಲಕ ಉನ್ನತ ಶಿಕ್ಷಣವನ್ನು ಪಡೆದಿರುವುದಲ್ಲದೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಕೈದಿಗಳಿಗೆ ಮಾರ್ಗ ದರ್ಶಕರಾಗಿದ್ದಾರೆ. ಅದರಲ್ಲೂ ಶಾಂತನ್ ಒಬ್ಬ ಒಳ್ಳೆಯ ಕಥೆಗಾರ. ಆತನ 40ಕ್ಕೂ ಹೆಚ್ಚು ಕಥೆಗಳನ್ನು ನಾನು ಅನುವಾದಿಸಿದ್ದು ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿ ಸೇರಿದಂತೆ ಅನೇಕ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಅಲ್ಲದೆ, ಈ ಕಥೆಗಳೆಲ್ಲವೂ ‘ರೆಕ್ಕೆಗಳಿಲ್ಲದ ಹಕ್ಕಿಗಳು’ ಎಂಬ ಶಿರೋ ನಾಮೆಯಲ್ಲಿ ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ. ಮರಣ ದಂಡನೆಗೆ ಗುರಿಯಾದ ವ್ಯಕ್ತಿಯೊಳಗಿನ ಮಾನವೀಯ ಅಂತಃಕರಣವನ್ನು ಈ ಕಥೆಗಳಲ್ಲಿ ಕಾಣಬಹುದು.
ಕಾರಾಗೃಹಗಳು ಅಪರಾಧಿಗಳ ಮನಃಪರಿವರ್ತನಾ ತಾಣಗಳಾಗಬೇಕೆ ಹೊರತು ವಧಾ ತಾಣಗಳಾಗಬಾರದು. ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ಪೀಠದ ಈ ತೀರ್ಪು ನಮ್ಮ ದೇಶದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.