ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದದ ಕೆಸರಲ್ಲಿ ಜೀವ ಪಡೆದ ಕಮಲ

Last Updated 3 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮಂಗಳೂರಿನ ಹೋಂ ಸ್ಟೇ ಮೇಲೆ ನಡೆದ ದಾಳಿಗೂ ಅಲ್ಲಿನ ಬದಲಾದ ರಾಜಕೀಯ ವಿದ್ಯಮಾನಗಳಿಗೂ ನಂಟಿಲ್ಲ ಎನ್ನುವುದು ದಡ್ಡತನದ ಮಾತಾದೀತು.ರಾಜಕೀಯ ಆಧಿಪತ್ಯಕ್ಕಾಗಿ ನಡೆಯುವ ಪೈಪೋಟಿ ಈ ಘಟನೆಗಳ ಹಿನ್ನೆಲೆಯಲ್ಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗಾಳಿ ಈ ಪರಿಯಾಗಿ ಬೀಸಲು ಏನು ಕಾರಣ? ಹಿಂದುತ್ವದ ಲಾಬಿ ರಾಜಕೀಯ ಲಾಭಕ್ಕೆ ಹೇಗೆ ಬಳಕೆ ಆಗುತ್ತಿದೆ? ಬಿಜೆಪಿ ಎಂದರೆ ಹುಚ್ಚೆದ್ದು ಕುಣಿಯುವ ಯುವಕರ ಪಡೆ ಎಲ್ಲಿ ಪ್ರಬಲವಾಯಿತು? ಅದರ ಒಂದೊಂದು ವಿಕೃತ ರೂಪಗಳು ಕೆಲವೊಮ್ಮೆ ಹೇಗೆ ಕಾಡುತ್ತಿವೆ? ಎಂದು ಕೆದಕುತ್ತ ಹೋದರೆ ತೆರೆದುಕೊಳ್ಳುವ ವಾಸ್ತವ ಬೆಚ್ಚಿಬೀಳಿಸುವಂತಹದ್ದು.

ರಾಜಕೀಯ ಅಸ್ತ್ರ: ರಾಮ ಮಂದಿರ ವಿವಾದವು ಬಿಜೆಪಿಗೆ ಇಲ್ಲಿ ಪ್ರಬಲ `ರಾಜಕೀಯ ಅಸ್ತ್ರ~ವಾಗಿ ಸಿಕ್ಕಿತು ಎಂದರೆ ತಪ್ಪಲ್ಲ. ರಾಮ ಮಂದಿರ ಕಟ್ಟುವ ಮನೆಮನೆ ಅಭಿಯಾನದ ಮೂಲಕ ಇಲ್ಲಿ ಸಂಘ ಪರಿವಾರ ಭದ್ರ ಬುನಾದಿಯನ್ನು ಕಂಡುಕೊಂಡಿತು. ಅಲ್ಲಿಯವರೆಗೂ ಇಲ್ಲಿ ಕಾಂಗ್ರೆಸ್ ಕೋಟೆ ಭದ್ರವಾಗಿತ್ತು. ಜನಾರ್ದನ ಪೂಜಾರಿ ಮೂರು ಸಾರಿ ಸಂಸದರಾಗಿ ಜನಪ್ರಿಯರಾಗಿದ್ದರು.

ಅವರ ಸಾಲ ಮೇಳ ಮನೆ ಮಾತಾಗಿತ್ತು. ರಾಮ ಮಂದಿರ ವಿವಾದಕ್ಕೆ ಮುನ್ನ ಇಲ್ಲಿ ಸಂಘ ಪರಿವಾರಕ್ಕೆ ಬಲವಾದ ಅಸ್ತ್ರ ಸಿಕ್ಕಿರಲಿಲ್ಲ. ಈ ವಿವಾದವನ್ನು ಸಮರ್ಥವಾಗಿ ಬಿಂಬಿಸುವ ಮೂಲಕ `ರಾಮನ ಅಲೆ~ ಇಲ್ಲಿ ಜೋರಾಗಿ ಎದ್ದಿತು. ಜನರ ಭಾವನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಇದು ನೆರವಾಯಿತು.

ಇದಕ್ಕೂ ಮುನ್ನ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಅಲ್ಲಲ್ಲಿ ಬಿಜೆಪಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇತ್ತು. ಉದಾಹರಣೆಗೆ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಕೂಡ ಕಾಂಗ್ರೆಸ್ ಹಿಡಿತದಲ್ಲೇ ಇತ್ತು. ಅಲ್ಲಿ ಸಂಘಟನೆ ಮೂಲಕ ಬಿಜೆಪಿ ತನ್ನ ಅಸ್ತಿತ್ವ ತೋರಿಸಿತು.

ಸಂಘ ನಿಕೇತನದಲ್ಲಿ ನೂರಾರು ಮತದಾರರನ್ನು ಸೇರಿಸಿ ಮತ ಹಾಕಿಸಲಾಯಿತು. ಅಲ್ಲಿಂದ ಈ ಅಭಿಯಾನ ಮುಂದುವರಿಯಿತು. ಇದಕ್ಕೂ ಮೊದಲೇ ಅಂದರೆ 1968ರಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಹೆಜ್ಜೆಯಾಗಿ ಉಡುಪಿ ನಗರಸಭೆಯಲ್ಲಿ ಜನಸಂಘ ಅಧಿಕಾರ ಹಿಡಿದಿತ್ತು. ವಿ.ಎಸ್. ಆಚಾರ್ಯರಂತಹ `ಥಿಂಕ್ ಟ್ಯಾಂಕ್~ ನಾಯಕರು ಅದರ ಆಧಾರಸ್ತಂಭಗಳಾಗಿದ್ದರು.

ಕಲ್ಲಡ್ಕ ಪ್ರಭಾಕರ ಭಟ್ಟರಂತಹ ಸಂಘದ ಮುಖಂಡರು ಉದ್ರೇಕಕಾರಿ ಭಾಷಣಕ್ಕೂ ಸೈ, ಸಂಘಟನೆಗೂ ಸೈ ಎನ್ನುವಂತಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ಟ, ದಾ.ಮಾ.ರವೀಂದ್ರ, ಡಾ. ಮಾಧವ ಭಂಡಾರಿ, ಉರಿಮಜಲು ರಾಮ ಭಟ್ಟರಂತಹ ಸೌಮ್ಯವಾದಿಗಳೂ ಮುಂಚೂಣಿಯಲ್ಲೇ ಇದ್ದರು.

ಇವತ್ತು ರಾಮ ಭಟ್ಟರನ್ನು ಮಾತನಾಡಿಸಿದರೆ `ಯಾಕಾಗಿ ಈ ಸಂಘಟನೆ ಕಟ್ಟಿದೆವೋ~ ಎನ್ನುವಷ್ಟರ ಮಟ್ಟಿಗೆ ಅವರು ಪರಿತಪಿಸುತ್ತಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ಹಿಡಿದಿರುವ ಮಾರ್ಗವನ್ನು ಅವರು `ಧರ್ಮ-ಸಂಕಟ~ ಎಂದೇ ವಿಶ್ಲೇಷಿಸುತ್ತಾರೆ.

ಇವರೊಬ್ಬರೇ ಅಲ್ಲ, ಸಂಘ ಪರಿವಾರಕ್ಕೆ ಹಾಗೂ ಪಕ್ಷಕ್ಕೆ ನಿಸ್ವಾರ್ಥವಾಗಿ ದುಡಿದ ಅನೇಕ ಹಿರಿಯರು ಇದೇ ಬಗೆಯ ವ್ಯಥೆಯನ್ನು ಹೊರಗೆಡಹುತ್ತಾರೆ. `ನಿಮ್ಮ ಹಿಂದುತ್ವ, ಸಂಸ್ಕೃತಿಯ ಉದ್ದೇಶ ಏನಿತ್ತು? ಈಗಿನ ಸಮಾಜ ಅದನ್ನು ಹೇಗೆ ಬಳಸುತ್ತಿದೆ?~ ಎಂದು ಕೇಳಿದರೆ ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಧಾರ್ಮಿಕ ದಾರಿ: ಇಲ್ಲಿನ ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ಬೆಂಬಲ ಕೂಡಾ ಸಂಘ ಪರಿವಾರ ನೆಲೆ ಪಡೆದುಕೊಳ್ಳಲು ಕಾರಣ. ಆಶ್ಚರ್ಯದ ಸಂಗತಿ ಎಂದರೆ ಇಲ್ಲಿ ಇತ್ತೀಚಿನವರೆಗೂ ಜಾತಿ ಹೆಸರಿನಲ್ಲಿ ಅಷ್ಟಾಗಿ ಮತ ವಿಭಜನೆ ಆಗಿಲ್ಲ, ಆದರೆ ಧರ್ಮದ ಆಧಾರದಲ್ಲಿ ಮತಗಳು ಒಡೆದಿವೆ. ಇದು ಅನ್ಯ ಧರ್ಮೀಯರ ಅಸಹನೆಗೂ ಕಾರಣವಾಗಿದ್ದುಂಟು. ಅಲ್ಲಲ್ಲಿ ಸಂಘರ್ಷಗಳಿಗೂ ಇದೇ ಕಾರಣವಾಯಿತು.
 
ರಾಜಕೀಯ ಅಸ್ತ್ರವಾಗಿಯೇ ಧರ್ಮವನ್ನು ಬಳಸಿಕೊಂಡ ಹಿಂದೂ ಸಮಾಜೋತ್ಸವಗಳು ಇಲ್ಲಿ ಗಮನ ಸೆಳೆದಿವೆ. ಮಂದಿರ-ದೇವಸ್ಥಾನಗಳ ಜೀರ್ಣೊದ್ಧಾರ, ಬ್ರಹ್ಮಕಲಶೋತ್ಸವಗಳು ಜಾತ್ರೆಯೋಪಾದಿಯಲ್ಲಿ ನಾಡಿನ ಉದ್ದಕ್ಕೂ ನಡೆಯುತ್ತಿವೆ. ಯಾಗ, ಯಜ್ಞಗಳು ಬಹಳಷ್ಟು ಸುದ್ದಿ ಮಾಡಿವೆ. ಕಳೆದ ಸಂಸತ್ ಚುನಾವಣೆಯಲ್ಲಿ ಇಲ್ಲಿ ಗೆದ್ದು ಬಂದ ನಳಿನ್ ಕುಮಾರ್ ಕಟೀಲು ಇಂತಹ ಸಂಘಟನೆಗಾಗಿಯೇ ಹೆಸರು ಮಾಡಿದವರು.

ಗೋ ದಾಳ:
ಗೋ ಹತ್ಯೆ ವಿರುದ್ಧ ಕರಾವಳಿಯಲ್ಲಿ ನಡೆದ ಹೋರಾಟಗಳೂ ಕೇಸರಿ ಪಡೆ ಬಲವಾಗಿ ಬೇರೂರಲು ಪ್ರಮುಖ ಕಾರಣವಾಯಿತು.. ಬಜರಂಗ ದಳ ಮತ್ತಿತರ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವು. ಚರ್ಚ್ ದಾಳಿಯಂತಹ ಕೆಲವು ಪ್ರಕರಣಗಳಲ್ಲಿ ಈ ಸಂಘಟನೆಯ ಪ್ರಮುಖರೇ ಆರೋಪಿಗಳಾಗಿದ್ದರು.

ಆದರೆ ಬಜರಂಗ ದಳದ ಕಟ್ಟಾ ನಾಯಕರಾಗಿದ್ದ ಮಹೇಂದ್ರ ಕುಮಾರ್ ಅವರನ್ನು ಮಾತನಾಡಿಸಿದರೆ ಈಗ ಅವರು ಸಂಘ ಪರಿವಾರದ ವಿರುದ್ಧ ಉರಿದು ಬೀಳುತ್ತಾರೆ.
ಬಿಜೆಪಿಯ ಸೌಮ್ಯವಾದಿ ನಾಯಕರೆಂದು ಹೇಳಲಾಗುತ್ತಿದ್ದ ರಾಮ ಭಟ್, ಶಕುಂತಲಾ ಶೆಟ್ಟಿ ಅವರಂತಹ ಹಿರಿಯರು ಹಿಂದೆ ಸರಿದರೆ, ಉಗ್ರರ ಪಡೆ ಮುಂಚೂಣಿಗೆ ಬಂತು.

ಹಲವಾರು ಅಪರಾಧಗಳ ಆರೋಪ ಹೊತ್ತವರು ಸೇರಿಕೊಂಡರು. ಇಂತಹವರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿಯೇ ಹಿಂದುತ್ವದ ಹೆಸರಲ್ಲಿ ಬೇರೆ ಬೇರೆ ಸಂಘಟನೆಗಳು ಹುಟ್ಟಿಕೊಂಡವು. ಈ ಸಂಘಟನೆಗಳು ಬಡಿದೆಬ್ಬಿಸುವ ಕೋಮುಭಾವನೆಯ ಲಾಭವನ್ನು ಪಡೆಯುತ್ತಾ ಬಂದ ಬಿಜೆಪಿ ಬಹಿರಂಗವಾಗಿ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ರಹಸ್ಯವಾಗಿ ಅವರಿಗೆ ಅಗತ್ಯವಾದ ರಕ್ಷಣೆ ಮತ್ತು ಸಂಪನ್ಮೂಲವನ್ನು ಒದಗಿಸುತ್ತಾ ಬಂದಿದೆ.

ಸಂಘರ್ಷಕ್ಕೆ ಹೇತು: ಕ್ರೈಸ್ತ ಮಿಷನರಿಗಳ ಪ್ರಭಾವ ಇಲ್ಲಿ ಹಿಂದಿನಿಂದಲೂ ಪ್ರಬಲವಾಗಿ ಇತ್ತು. ಮುಸ್ಲಿಮರಲ್ಲಿ ಬಹುಪಾಲು ಮಂದಿ ವಿದೇಶಗಳಿಗೆ ಹೋಗಿ, ಇಲ್ಲವೇ ವ್ಯಾಪಾರದ ಮೂಲಕ ಆರ್ಥಿಕವಾಗಿ ಪ್ರಬಲರಾಗತೊಡಗಿದರು. ಕರಾವಳಿಯಲ್ಲಿ ಇಂದಿಗೂ ವ್ಯಾಪಾರಿ ಸಮುದಾಯ ಎಂದರೆ ಪ್ರಮುಖವಾಗಿ ಮುಸ್ಲಿಮರು ಮತ್ತು ಕೊಂಕಣಿಯವರು.
 
ಇವರ ಮಧ್ಯೆ `ವ್ಯಾಪಾರಿ ಸ್ಪರ್ಧೆ~ ಇದ್ದೇ ಇದೆ.  ಕ್ರಿಶ್ಚಿಯನರು ಮತ್ತು ಮುಸ್ಲಿಮರ ಸಾಧನೆ ಕೂಡಾ ಬಹುಸಂಖ್ಯಾತರಾದ ಹಿಂದೂಗಳ ಕಣ್ಣು ಕೆಂಪಗಾಗಲು ಕಾರಣ. ಈ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಂಡ ಬಿಜೆಪಿ ರಾಜಕೀಯವಾಗಿ ಬುಡ ಭದ್ರಗೊಳಿಸುತ್ತಲೇ ಬಂದಿದೆ. ಇಲ್ಲಿ ವಿಜೃಂಭಿಸುತ್ತಿರುವ ಧಾರ್ಮಿಕ ಮೂಲಭೂತವಾದ ಹಿನ್ನೆಲೆಯಲ್ಲಿ ಕೇವಲ ಧರ್ಮ ಮಾತ್ರ ಇಲ್ಲ, ವ್ಯಾಪಾರವೂ ಇದೆ.

ಇಲ್ಲಿನ ಶ್ರೀಮಂತ ಹಿಂದೂಗಳಲ್ಲಿ ಬಹುಪಾಲು ಈಗಲೂ `ಪಬ್ ಪರಂಪರೆ~ಯವರೇ. ಅವರ ವಿರುದ್ಧ ದಾಳಿ ನಡೆಸುತ್ತಿರುವರು ಆರ್ಥಿಕವಾಗಿ ಬಹಳ ಹಿಂದುಳಿದವರು. ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವನ್ನು ಕೂಡಾ ಇಲ್ಲಿ ಕಾಣಬಹುದು. ದುರಂತ ಎಂದರೆ ಗಲಾಟೆ ಮಾಡಿ ಜೈಲಿಗೆ ಹೋಗುವವರು ಯಾರೋ, ಚುನಾವಣೆಯಲ್ಲಿ ಟಿಕೆಟ್ ಪಡೆದು ವಿಧಾನಸಭೆ-ಲೋಕಸಭೆಗೆ ಹೋಗುವವರು ಯಾರೋ ಎಂದಾಗಿದೆ.

ಯಾರದೋ ಗುಪ್ತ ರಾಜಕೀಯ ಕಾರ್ಯಸೂಚಿಗಾಗಿ ತಾವು ಅಸ್ತ್ರಗಳಾಗಿ ಬಳಕೆಯಾಗುತ್ತಿದ್ದೇವೆ ಎಂಬ ಪ್ರಜ್ಞೆ ಬಿಸಿರಕ್ತದ ಯುವಕರಲ್ಲಿಯೂ ಇಲ್ಲ. ಅವರನ್ನು ಮುನ್ನಡೆಸುವ ನಾಯಕರು ಈ ಸತ್ಯವನ್ನು ಅವರಿಗೆ ತಿಳಿಸಿ ಜಾಗೃತಗೊಳಿಸುತ್ತಿಲ್ಲ. ಅವರ ಭವಿಷ್ಯದ ಬಗ್ಗೆ ಯಾರಿಗೂ ಕಾಳಜಿ ಇಲ್ಲ.

ಪುತ್ತೂರಿನಲ್ಲಿ ಕಳೆದ ವರ್ಷ ಸಂಭವಿಸಿದ ವಿದ್ಯಾರ್ಥಿನಿ ಸೌಮ್ಯ ಭಟ್ ಕೊಲೆ ಪ್ರಕರಣವಾಗಲೀ, ಕಾಲೇಜುಗಳಲ್ಲಿ ಆಗಾಗ್ಗೆ ಸ್ಫೋಟಿಸುವ ಬುರ್ಖಾ ಅಥವಾ ಸ್ಕಾರ್ಫ್ ವಿವಾದಗಳೇ ಆಗಲೆ ಇವೆಲ್ಲವೂ ರಾಜಕೀಯ ಪ್ರೇರಿತ ಘಟನೆಗಳು ಎಂಬುದರಲ್ಲಿ ಎರಡು ಮಾತಿಲ್ಲ.

ಸುಳ್ಯದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಭಾಗವಹಿಸಿದರು. ಸಂಘ ಪರಿವಾರದ ನಾಯಕರು ಅವರನ್ನು ಬೆಂಬಲಿಸಿದರು. ಸರ್ಕಾರವೂ ಇದನ್ನು ಸಮರ್ಥಿಸಿತು.

ಕಾಂಗ್ರೆಸ್ ಹಿನ್ನಡೆ: ಜಾತ್ಯತೀತ ಪಕ್ಷ ಎಂದುಕೊಂಡರೂ ಕಾಂಗ್ರೆಸ್ ಕೂಡ ಜಾತ್ಯತೀತವಾಗಿ ಉಳಿದಿಲ್ಲ. ಅಲ್ಪಸಂಖ್ಯಾತರ ಓಲೈಕೆಗೆ ಒತ್ತು ಕೊಡುತ್ತ ಬಂದಿರುವುದೂ ಇಲ್ಲಿ ಅದಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಅದರ ನಂತರ ಮೃದು ಹಿಂದುತ್ವದ ಮೂಲಕ ಬಿಜೆಪಿ ದಾರಿಯಲ್ಲೇ ಸಾಗಲು ಕೆಲವು ಕಾಂಗ್ರೆಸ್ ಮುಖಂಡರೂ ಮುಂದಾದರು. ರಾಜಕೀಯವಾಗಿ ಅದೂ ಮುಳುವಾಯಿತು.

ಅಭಿವೃದ್ಧಿ ವಿಷಯಗಳಲ್ಲಿ ಇಲ್ಲಿನ ಹಿನ್ನಡೆಗಳನ್ನು ಯಾರೂ ಪರಿಗಣಿಸಿಯೇ ಇಲ್ಲ. ನಾಯಕರ ಸಂಖ್ಯೆಯೂ ಇಲ್ಲಿ ಹೆಚ್ಚಾಯಿತು. ಇಲ್ಲಿನ ತ್ರಿವಳಿ ನಾಯಕರಾದ ಜನಾರ್ದನ ಪೂಜಾರಿ, ಎಂ.ವೀರಪ್ಪ ಮೊಯಿಲಿ ಮತ್ತು ಆಸ್ಕರ್ ಫರ್ನಾಂಡಿಸ್‌ಒಂದೇ ವೇದಿಕೆಗೆ ಬರುವುದೇ ಅಪರೂಪ.

ಅವರ ಒಳಜಗಳದಿಂದಾಗಿ ಆ ಪಕ್ಷದ ಕಾರ್ಯಕರ್ತರ ಗುಂಪು ಕೂಡಾ ಒಡೆದು ಹೋಗಿದೆ. ಕರಾವಳಿ ಇಂದು ಎದುರಿಸುತ್ತಿರುವ ಪರಿಸ್ಥಿತಿಗೆ ಪರ್ಯಾಯ ರಾಜಕೀಯವನ್ನು ನೀಡಲಾಗದ ಕಾಂಗ್ರೆಸ್ ವೈಫಲ್ಯವೂ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT