ನಗರ ಪ್ರದೇಶಗಳಲ್ಲಿನ ಘನ ತ್ಯಾಜ್ಯ ನಿರ್ವಹಣೆ ಅಥವಾ ಕಸ ವಿಲೇವಾರಿ ಇಂದು ಕೇವಲ ಸ್ಥಳೀಯ ಸಮಸ್ಯೆಯಾಗಷ್ಟೇ ಉಳಿಯದೆ, ವಿಶ್ವದ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿಯೊಬ್ಬ ನಗರವಾಸಿ ತಲಾ 250ರಿಂದ 500 ಗ್ರಾಮ್ನಷ್ಟು ಕಸವನ್ನು ಪ್ರತಿ ದಿನವೂ ಹೊರಹಾಕುತ್ತಾನೆ. ಇದರಿಂದ ಎಲ್ಲ ನಗರಗಳಲ್ಲೂ ದಿನನಿತ್ಯ ಸಾವಿರಾರು ಟನ್ಗಳಷ್ಟು ಕಸ ಸಂಗ್ರಹವಾಗುತ್ತಿದ್ದು, ದಿನೇದಿನೇ ನಿರ್ವಹಣೆಯ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಇದರ ದುಷ್ಪರಿಣಾಮಗಳು ಒಂದೆಡೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ ಆತಂಕಗಳನ್ನು ತಂದೊಡ್ಡುತ್ತಿದ್ದರೆ, ಇನ್ನೊಂದೆಡೆ ಕಸದ ರಾಶಿಯಿಂದ ಹೊರಡುವ ಮೀಥೇನ್ ಅನಿಲ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕೊಳೆಯುವ ವಸ್ತುಗಳಿಂದ ಉತ್ಪಾದನೆಯಾಗುವ ಲೀಚಟ್ (ವಿಷಕಾರಿ ದ್ರವ) ಅಂತರ್ಜಲ ಹಾಗೂ ಹರಿಯುವ ನೀರಿನಲ್ಲಿ ಸೇರಿಕೊಂಡು ಹಳ್ಳ, ಕೆರೆ, ನದಿ, ಸಮುದ್ರದ ನೀರನ್ನು ಕಲುಷಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ತ್ಯಾಜ್ಯ ನಿರ್ವಹಣೆಯ ವೈಫಲ್ಯಗಳು ಭೂ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತಿವೆ.
ಹೀಗೆ ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿರುವ ಹಿನ್ನೆಲೆಯಲ್ಲಿ, ಕಸ ನಿರ್ವಹಣೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಮಸ್ತ ಜನರ ಹಿತಾಸಕ್ತಿ ದೃಷ್ಟಿಯಿಂದ ಸಮಗ್ರವಾಗಿ ಅದನ್ನು ನಿರ್ವಹಿಸಲು ವಿನೂತನವಾದ, ಸಂಶೋಧನಾತ್ಮಕ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಇದಕ್ಕೆ ಸ್ಥಳೀಯ ಆಡಳಿತ ಹಾಗೂ ಜನತೆ ಮುಂದಾಗಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯ ಸಹ.
ಪ್ರಸ್ತುತ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯು ಕೇಂದ್ರೀಕೃತವಾಗಿದೆ. ಇದನ್ನು ವಿಕೇಂದ್ರೀಕೃತವಾಗಿ ಮಾಡುವುದು ಸಮರ್ಪಕ ತ್ಯಾಜ್ಯ ನಿರ್ವಹಣೆ ದೃಷ್ಟಿಯಿಂದ ಸಾಕಷ್ಟು ಸಹಕಾರಿ. ಕಸ ವಿಲೇವಾರಿಯಲ್ಲಿ ಸಾರ್ವಜನಿಕರು, ಕಸ ಸಂಗ್ರಹಣೆ ಹಾಗೂ ನಿರ್ವಹಣೆ ಮಾಡುವ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಈ ಎರಡೂ ವಿಭಾಗಗಳು ಜಾಗೃತಗೊಂಡು ತಮ್ಮನ್ನು ಈ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ, ನಗರಗಳ ತ್ಯಾಜ್ಯ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯಲು ಸಾಧ್ಯ.
ಸಾರ್ವಜನಿಕರಿಗೆ ತಮ್ಮ ಮನೆಯ ಕಸ ತಮ್ಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ ಎಂಬ ಅರಿವಿರಬೇಕು. ಕಸ ವಿಲೇವಾರಿ ಕಾರ್ಯವು ಕಾರ್ಮಿಕರಿಗೆ ಒಂದು ಸಮಾಜ ಸೇವೆಯಾಗಿ ಹಾಗೂ ಲಾಭದಾಯಕ ವೃತ್ತಿಯಾಗಿ ಪರಿವರ್ತನೆಗೊಳ್ಳಬೇಕಿದೆ.
ಬೇಕು ಎಲ್ಲರ ಸಹಭಾಗಿತ್ವ: ನಗರ ಪ್ರದೇಶದ ಒಂದು ವಾರ್ಡ್ ಇಲ್ಲವೇ 10 ಸಾವಿರ ಜನಸಂಖ್ಯೆಯನ್ನು ಒಂದು ಘಟಕವೆಂದು
ಪರಿಗಣಿಸುವುದು, ಸಾರ್ವಜನಿಕರು ಕೊಳೆಯುವ ಮತ್ತು ಕೊಳೆಯದೇ ಇರುವ ಕಸವನ್ನು ಪ್ರತ್ಯೇಕವಾಗಿ ನೀಡುವಂತೆ ಮಾಡುವುದು, ಪ್ರತಿ ನೂರು ಮನೆಗೆ ಒಬ್ಬರಂತೆ ಹಿರಿಯ ನಾಗರಿಕರನ್ನು ಗುರುತಿಸಿ ಒಂದು ಉಸ್ತುವಾರಿ ಸಮಿತಿ ರಚಿಸುವುದು, ಆ ಪ್ರದೇಶದಲ್ಲಿ ಕ್ರಿಯಾಶೀಲವಾಗಿರುವ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿ ಹಾಗೂ ಕಸ ಸಂಗ್ರಹಿಸುವವರ ಪ್ರತಿನಿಧಿ, ಸ್ಥಳೀಯ ಚುನಾಯಿತ ಪ್ರತಿನಿಧಿ ಹಾಗೂ ವಾರ್ಡ್ನ ಉಸ್ತುವಾರಿ ಹೊತ್ತಿರುವ ಅಧಿಕಾರಿಯನ್ನು ಸಮಿತಿಯ ಸದಸ್ಯರನ್ನಾಗಿ ಮಾಡುವುದು, ಸಮಿತಿಯ ಮುಂದಾಳತ್ವವನ್ನು ಬಹುಸಂಖ್ಯೆಯ ಸಾರ್ವಜನಿಕರ ಒಪ್ಪಿಗೆಯನ್ನು ಆಧರಿಸಿ ನೀಡುವುದು ಈ ಕಾರ್ಯದಲ್ಲಿ ನೆರವಾಗುತ್ತದೆ.
ಪ್ರತಿ ಕುಟುಂಬದಿಂದ ದಿನಕ್ಕೆ 1 ರೂಪಾಯಿಯನ್ನು ಕಸ ಸಂಗ್ರಹಿಸುವ ಕಾರ್ಮಿಕರಿಗೆ ನೀಡಬೇಕು. ಕಸ ಸಂಗ್ರಹಿಸದ ದಿನ ಹಣ ನೀಡಬಾರದು. ಇದರಿಂದ ಅನಿವಾರ್ಯವಾಗಿ ಕಾರ್ಮಿಕರು ಕಸ ಸಂಗ್ರಹಣೆ ಮಾಡುವಂತಹ ಒತ್ತಡಕ್ಕೆ ಒಳಗಾಗುತ್ತಾರೆ. ಒಬ್ಬ ಕಾರ್ಮಿಕನಿಗೆ ಕನಿಷ್ಠ 100-ರಿಂದ 200 ಮನೆಗಳ ಉಸ್ತುವಾರಿಯನ್ನು ನೀಡಬೇಕು. ಇದು ಪ್ರತಿ ಕಾರ್ಮಿಕನಿಗೆ ತಿಂಗಳಿಗೆ ಕನಿಷ್ಠ ₨ 5,000 ಆದಾಯದ ಮೂಲ ಆಗುತ್ತದೆ.
ಸಾರ್ವಜನಿಕರು ಹಾಗೂ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಉಸ್ತುವಾರಿ ಸಮಿತಿಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಮಿಕರ ಸಹಕಾರಿ ಸಂಘಗಳನ್ನು ರಚಿಸಿ ಉಳಿತಾಯ ಯೋಜನೆಗೆ, ಅವರ ಆರೋಗ್ಯ ರಕ್ಷಣೆಗೆ ಮುಂದಾದರೆ ಕಸ ವಿಲೇವಾರಿಯನ್ನು ಅವರು ಸಂಪೂರ್ಣ ವೃತ್ತಿಯನ್ನಾಗಿ ಸ್ವೀಕರಿಸಲು ಸಹ ಸಾಧ್ಯವಾಗುತ್ತದೆ.
ಕಸದಿಂದ ರಸ: ಕಸವನ್ನು ಲಾಭದಾಯಕ ರಸವನ್ನಾಗಿ ಮಾಡುವುದು ಅತ್ಯಂತ ಮುಖ್ಯವಾದ ಕಾರ್ಯ. ಕೊಳೆಯುುವಂತಹ ಕಸವನ್ನು ಆಯಾ ದಿನವೇ ನಿರ್ವಹಣೆ ಮಾಡುವುದರಿಂದ ಕಾರ್ಮಿಕರಿಗೆ ಆದಾಯ ಮೂಲವಾಗಿ, ರೈತರಿಗೆ ಸಾವಯವ ಗೊಬ್ಬರವಾಗಿ, ಮಣ್ಣಿಗೆ ಸಾವಯವ ಶಕ್ತಿಯಾಗಿ ಅದನ್ನು ಪರಿವರ್ತಿಸ ಬಹುದು. ಶ್ರೆಡ್ಡರ್ಗಳ ಮುಖಾಂತರ (₨ 50 ಸಾವಿರದಿಂದ ಒಂದು ಲಕ್ಷ ಬೆಲೆಯುಳ್ಳ ಈ ಯಂತ್ರ ಎಲ್ಲ ಕೊಳೆಯುವ ವಸ್ತುಗಳನ್ನೂ ಪುಡಿ ಮಾಡುತ್ತದೆ) ಕೊಳೆಯುವ ಪದಾರ್ಥಗಳನ್ನು ಮಿಶ್ರ ಮಾಡಿ ಪುಡಿ ಮಾಡಿಕೊಳ್ಳಬೇಕು.
ತರಕಾರಿ ತ್ಯಾಜ್ಯ, ಅಡುಗೆ ಪದಾರ್ಥ, ಗಿಡ ಮರಗಳ ಎಲೆಗಳು, ರದ್ದಿ ಪೇಪರ್, ಮರಗಳ ಚೆಕ್ಕೆ ಇನ್ನಿತರ ಕೊಳೆಯುವ ಪದಾರ್ಥಗಳನ್ನು ದ್ರವ ಪದಾರ್ಥಗಳಿಂದ ಬೇರ್ಪಡಿಸಿ ಶ್ರೆಡ್ಡರ್ ಬಾಯಿಗೆ ನೀಡುವಂತಾದರೆ ಎಲ್ಲವೂ ಮಿಶ್ರಣಗೊಂಡು ಪೌಡರ್ ರೂಪದ ಗೊಬ್ಬರ ತಯಾರಾಗುತ್ತದೆ. ಒಂದು ಕೆ.ಜಿ ತ್ಯಾಜ್ಯ ರೂಪಾಂತರಗೊಂಡು 300 ಗ್ರಾಮ್ ಗೊಬ್ಬರವಾಗುತ್ತದೆ. ಕಸವನ್ನು ಕೊಳೆಯುವ ಮುಂಚೆಯೇ ಶ್ರೆಡ್ಡರ್ಗೆ ಅಳವಡಿಸುವುದರಿಂದ ದುರ್ವಾಸನೆ ಇರಲಾರದು. ಒಂದು ವಾರದಲ್ಲಿ ಅದು ಗಾಳಿಗೆ ಒಣಗಿ ಸತ್ವಪೂರ್ಣ ಗೊಬ್ಬರವಾಗಿ ಕೃಷಿ ಭೂಮಿಗೆ, ತೋಟಗಾರಿಕೆ ಹಾಗೂ ನಗರದ ತೋಟಗಳಿಗೆ, ಮನೆಗಳ ಕೈ ತೋಟಗಳಿಗೆ ಬಳಸುವಂತೆ ಆಗುತ್ತದೆ. ಸಾರಜನಕ ಹಾಗೂ ಕಾರ್ಬನ್ಗಳ ಈ ಮಿಶ್ರಣ ಸತ್ವಪೂರ್ಣವಾದ ಸಾವಯವ ಗೊಬ್ಬರವಾಗುತ್ತದೆ.
ಈ ಗೊಬ್ಬರವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಹಕ್ಕನ್ನು ಕಾರ್ಮಿಕರಿಗೆ ನೀಡಬೇಕು. 200 ಕುಟುಂಬಗಳಿಂದ ಪ್ರತಿ ತಿಂಗಳಿಗೆ 500 ಕೆ.ಜಿ.ಯಷ್ಟು ಸಾವಯವ ಗೊಬ್ಬರವನ್ನು ಉತ್ಪಾದಿಸುವ ಸಾಧ್ಯತೆ ಇರುತ್ತದೆ. ಅದರಿಂದ ಪ್ರತಿ ಕಾರ್ಮಿಕ ₨ 2,000ದಿಂದ 5,000ದವರೆಗೆ ಆದಾಯ ಪಡೆಯಲು ಸಾಧ್ಯವಾಗುತ್ತದೆ. ಪ್ಲಾಸ್ಟಿಕ್, ಕಬ್ಬಿಣ, ಕಲ್ಲು ಹಾಗೂ ಇತರ ಒಣ ತ್ಯಾಜ್ಯ ಬೇರ್ಪಡಿಸಿ, ಮರುಬಳಕೆ ಮುಖಾಂತರ ಬರುವ ಆದಾಯವನ್ನೂ ಕಾರ್ಮಿಕರೇ ಪಡೆಯುವಂತೆ ಆಗಬೇಕು.
ಬೇಕು ಸೂಕ್ಷ್ಮಾಣು ಜೀವಿಗಳು: ಕಸ ನಿರ್ವಹಣೆಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚು ಬಳಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಆಧುನಿಕ ಜೀವನ ಕ್ರಮದಲ್ಲಿ ಪ್ರತಿ ಕ್ಷಣವೂ ರಾಸಾಯನಿಕ ಬಳಸಲಾಗುತ್ತಿದೆ. ಇದರಿಂದ ಮಣ್ಣು, ನೀರು, ಗಾಳಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿವೆ. ಹೀಗಾಗದಂತೆ ಪರಿಸರವನ್ನು ರಕ್ಷಿಸಲು ತ್ಯಾಜ್ಯದಿಂದ ತಯಾರಿಸುವ ಗೊಬ್ಬರಕ್ಕೆ ಸೂಕ್ಷ್ಮಾಣು ಜೀವಿಗಳನ್ನು ಸಿಂಪಡಣೆ ಮಾಡಬೇಕು (ಇಫೆರ್ದೆಮ್ ಮೈಕ್ರೊ ಆರ್ಗ್ಯಾನಿಸಂ ತಂತ್ರಜ್ಞಾನ) ಇದರಿಂದ ಕಸದ ದುರ್ವಾಸನೆ ತಡೆಯುವುದರ ಜೊತೆಗೆ ಕಡಿಮೆ ಸಮಯದಲ್ಲಿ ಗೊಬ್ಬರ ತಯಾರಿಸಬಹುದು.
ಇಂತಹ ವಿಕೇಂದ್ರೀಕೃತ ಕಸ ವಿಲೇವಾರಿಯಿಂದ ಸಾರಿಗೆ ವೆಚ್ಚ ಕಡಿತಗೊಳಿಸುವುದು, ಕಡಿಮೆ ಭೂಮಿಯನ್ನು ಬಳಕೆ ಮಾಡುವುದು ಮಾತ್ರವಲ್ಲ ಸಮಸ್ತ ಜನರ ಹಿತಾಸಕ್ತಿಯನ್ನು ಕಾಪಾಡುವಂತಹ ಸಮಗ್ರ ಕಸ ನಿರ್ವಹಣಾ ವ್ಯವಸ್ಥೆಯನ್ನು ಹುಟ್ಟು ಹಾಕಲು ಸಹ ಸಾಧ್ಯವಾಗುತ್ತದೆ.
(ಲೇಖಕರು ಸಾವಯವ ಕೃಷಿ ಕಾರ್ಯಕರ್ತರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.