ನಾನು ನಿನ್ನ ಹಾಗೆ ಎಲ್ಲವನ್ನೂ ಮೆಟ್ಟಿ ನಿಲ್ಲಬಲ್ಲ ವಾಮನನಲ್ಲ. ಭೂಮಿಯ ಮೇಲಿನ ಒಂದು ಉಸಿರು ಅಷ್ಟೆ. ನಿನ್ನನ್ನು ನಂಬಿ ಬದುಕುತ್ತಿರುವವಳು. ಕಷ್ಟಗಳ ಮೂಟೆ ಹೊತ್ತವಳು. ಕತ್ತಲೆಯ ಸಂದಿಯಲಿ ಬೆಳಕು ನುಸುಳುವುದೆಂಬ ಭರವಸೆ ಉಳ್ಳವಳು. ಹಗಲಿರುಳು ನಿರೀಕ್ಷೆ ಉಳ್ಳವಳು. ಎಂದಿಗೂ ಆಸ್ತಿ-ಅಂತಸ್ತು ಸುಖಕ್ಕಾಗಿ ಹಾತೊರೆದವಳಲ್ಲ. ನನ್ನ ಮನದ ದುಗುಡ–ತುಮುಲಗಳ ಹಂಚಿಕೊಳ್ಳಲು ಮುಗ್ಧ ಮನವೊಂದನ್ನು ಅರಸುವವಳು. ಆ ಮನಸಿನ ಮೇಲೆ ಮಲಗಿ ಹಸಿ ಕನಸ ಕಟ್ಟಬೇಕೆನ್ನುವ, ಅತ್ತು ಹಗುರಾಗುವ ಬಯಕೆ ಉಳ್ಳವಳು.
ನನ್ನ ಬಾಳೊಂದು ತೂಗುಯ್ಯಾಲೆ ಆಗುವುದೆಂಬ ಭರವಸೆಯನ್ನು ಹೊಂದಿದ್ದೆ. ಸೂರ್ಯನ ಬೆಳಕಿರಲಿ, ಒಂದು ಮೊಂಬತ್ತಿಯೂ ಬೆಳಗಲಿಲ್ಲ. ತಂಗಾಳಿ ಇರಲಿ, ತಿಳಿ ಬೆಳದಿಂಗಳು ಕೂಡಾ ಕಾಣಲಿಲ್ಲ. ಕನಸೆಂಬ ಹಕ್ಕಿಯ ರೆಕ್ಕೆ-ಪುಕ್ಕ ಒಂದೊಂದಾಗಿ ಕಳಚುತ್ತಾ ಹೋಯ್ತು. ಮೇಲೇಳೋಕೆ ಸಾಧ್ಯ ಆಗದೇ ಹೋಯ್ತು. ದಿಂಬು-ಹಾಸಿಗೆಗಳು ಮಾತ್ರ ನನ್ನ ಕಣ್ಣೀರಿನ ಕಥೆ ಕೇಳ್ತಾ ಹೋದ್ವು. ನಿದ್ದೆ ಮಾತ್ರ ನನ್ನ ಸಮಾಧಾನ ಮಾಡ್ತ, ಸಾಂತ್ವನ ಹೇಳ್ತಾ ಹೋಯ್ತು.
ಕಿಟಕಿಯ ಪರದೆ ಸರಿಸಿದ್ರೆ ಎಷ್ಟು ಸುಂದರವಾದ ಪ್ರಪಂಚ! ನೀಲಿ ಮುಗಿಲು, ಅಲ್ಲಲ್ಲಿ ಹರಡಿದೆ ಬೆಳ್ಳನೆಯ ಮೋಡಗಳ ರಾಶಿ. ಸ್ವಚ್ಛಂದವಾಗಿ ಹಾರುವ ಬಣ್ಣದ ಹಕ್ಕಿಗಳು. ಜಿನುಗುವ ಇಬ್ಬನಿಯ ಹನಿ. ಬಿರಿದು ನಿಂತಿರುವ ನೂರಾರು ಹೂಗಳು. ಸೂರ್ಯನ ಮದರಂಗಿ ಬಣ್ಣ ತಂದು ನನ್ನವನ ಕೈಯಿಂದ ನನ್ನ ಕೆನ್ನೆಗೆ ರಂಗು ಹಚ್ಚಿಸಿಕೊಳ್ಳಬೇಕು.
ದೊಡ್ಡದಾಗಿ ರೆಕ್ಕೆ ಅಗಲಿಸಿ ತಿಳಿನೀರಿನ ಕೊಳಕ್ಕೆ ಧುಮುಕಿ ಕಪ್ಪೆ ಚಿಪ್ಪಲ್ಲಿರೋ ಮುತ್ತು ತೆಗೀಬೇಕು. ಕಾಮನಬಿಲ್ಲನ್ನು ತಂದು ಮನೆಯ ಮುಂಬಾಗಿಲಿನ ತೋರಣ ಮಾಡ್ಬೇಕು... ಹೀಗೆ ಎಷ್ಟೊಂದು ಕನಸುಗಳು. ಕಂಡ ಕನಸುಗಳಿಗೆ ಬೇಲಿಯೇ? ಕೂತಲ್ಲಿ-ನಿಂತಲ್ಲಿ ಕನಸುಗಳಿಗೇನು ಬರವಿಲ್ಲ. ಮನದ ಮೂಲೆಯೆಂದರೆ ಕನಸುಗಳ ರಂಗಸ್ಥಳವಲ್ಲವೇ?
ಪ್ರೇಮವೆಂಬ ಕೆಂದಾವರೆಯಿಂದ ಕೂಡಿದ ತಿಂಗಳ ಬೆಳಕಿನಿಂದಾವರಿಸಿದ ತಿಳಿನೀರಿನ ಕೊಳದಂತಿತ್ತು ನನ್ನ ಮನ. ವಿಧಿಯ ಹೊಡೆತಕ್ಕೆ ಸಿಕ್ಕು ಅಲ್ಲೋಲ-ಕಲ್ಲೋಲ ಆಗಿಬಿಟ್ಟಿತು, ಶಾಪಗ್ರಸ್ಥ ಗಂಧರ್ವ ಕನ್ಯಯಂತೆ! ಯಾರೂ ಮುಡಿಯದ, ಕಂಪ ಬೀರದ, ಕಾನನದಲ್ಲರುವ, ನಾನೊಂದು ಕಾಡುಮಲ್ಲಿಗೆ! ನನಗೂ ಬಯಕೆಯಿದೆ. ಆಸೆ-ಆಕಾಂಕ್ಷೆಯಿದೆ.
ದೇವರ ಮುಡಿಗಂತೂ ಏರಲಾರೆ. ಪಾದದ ಹೂವಾದರೂ ಕೊನೆಗೆ ಕಾಯಬೇಕಷ್ಟೆ. ಕಾಯುತ್ತೀನಿ, ಮೋಹನ ಮುರಳಿಯನ್ನ. ಅವನು ಬರುವವರೆಗೂ ಅದೇ ಭರವಸೆ. ಅದೇ ನಂಬಿಕೆ. ಸಾಕು ಮಾಡಿನ್ನು ಬದುಕು ಜಟಕಾ-ಬಂಡಿಯ ಪಯಣ. ಮಾಡು ನನ್ನ ಬದುಕನ್ನು ಹೊಚ್ಚ ಹೊಸ ಹೂತೋಟ! ನನ್ನಂತೆ ನೊಂದವರ ಸಲವು-ಸಂತೈಸು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.