ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind Vs WI- ವಿಜಯದ ಸಿಕ್ಸರ್ ಹೊಡೆದ ಹಾರ್ದಿಕ್ ಪಾಂಡ್ಯ ವಿರುದ್ಧ ಅಭಿಮಾನಿಗಳ ಟೀಕೆ

Published 9 ಆಗಸ್ಟ್ 2023, 12:48 IST
Last Updated 9 ಆಗಸ್ಟ್ 2023, 12:48 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಂಗಳವಾರ ವೆಸ್ಟ್ ಇಂಡೀಸ್ ಎದುರಿನ ಮೂರನೇ ಪಂದ್ಯದಲ್ಲಿ  ವಿಜಯದ ಸಿಕ್ಸರ್ ಹೊಡೆದರು. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೊಳಗಾಗಿದ್ದಾರೆ.

ಅದಕ್ಕೆ ಕಾರಣ ಇನ್ನೊಂದು ಬದಿಯಲ್ಲಿದ್ದ ಬ್ಯಾಟರ್ ತಿಲಕ್ ವರ್ಮಾ ಅವರಿಗೆ ಅರ್ಧಶತಕ ಪೂರೈಸಲು ಹಾರ್ದಿಕ್ ಅವಕಾಶ ಕೊಡಲಿಲ್ಲ ಎಂಬುದು. ಗಯಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 159 ರನ್‌ ಗುರಿ ಬೆನ್ನಟ್ಟಿತ್ತು. ಹಾರ್ದಿಕ್ ಬಳಗವು 17.5 ಓವರ್‌ಗಳಲ್ಲಿ  3 ವಿಕೆಟ್‌ಗಳಿಗೆ 164 ರನ್‌ ಗಳಿಸಿ, 7 ವಿಕೆಟ್‌ಗಳಿಂದ ಜಯಿಸಿತು. ಸೂರ್ಯಕುಮಾರ್ ಯಾದವ್ (83; 44ಎ, 10X4, 6X4) ಮತ್ತು ತಿಲಕ್ (ಅಜೇಯ 49; 37ಎ, 4X4, 6X1) ಮೂರನೇ ವಿಕೆಟ್ ಜೊತೆಯಾಟಲದ್ಲಿ 87 ರನ್‌ಗಳನ್ನು ಸೇರಿಸಿ ತಂಡವನ್ನು ಜಯದತ್ತ ಮುನ್ನಡೆಸಿದರು.  ಆದರೆ 13ನೇ ಓವರ್‌ನಲ್ಲಿ ಸೂರ್ಯ ಔಟಾದಾಗ ಭಾರತ ತಂಡವು ಮೂರು ವಿಕೆಟ್‌ಗಳಿಗೆ  121 ರನ್‌ ಗಳಿಸಿತ್ತು. ಈ ಹಂತದಲ್ಲಿ ತಿಲಕ್ ಜೊತೆ ಹಾರ್ದಿಕ್ ಸೇರಿಕೊಂಡರು.

18ನೇ ಓವರ್‌ನಲ್ಲಿ ಗೆಲುವಿನ ಕೊನೆಯ ಒಂದು ರನ್‌ ಮಾತ್ರ ಬೇಕಿದ್ದಾಗ ಹಾರ್ದಿಕ್ ಬ್ಯಾಟಿಂಗ್ ಮಾಡುತ್ತಿದ್ದರು. ನಾನ್‌ಸ್ಟ್ರೈಕರ್‌ನಲ್ಲಿ ತಿಲಕ್ ಇದ್ದರು. ಓವರ್‌ನ ಐದನೇ ಎಸೆತವನ್ನು ಹಾರ್ದಿಕ್ ಸಿಕ್ಸರ್‌ಗೆ ಎತ್ತಿದರು.

‘ತಿಲಕ್ ವರ್ಮಾ ಈ ಸರಣಿಯಲ್ಲಿ ಅಮೋಘವಾಗಿ ಆಡುತ್ತಿದ್ದಾರೆ.  ತಮ್ಮ ವೃತ್ತಿಜೀವನದ ಮೊದಲ ಮೂರು ಟಿ20 ಪಂದ್ಯಗಳಲ್ಲಿ  30ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.  ಎರಡನೇ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಈ ಪಂದ್ಯದಲ್ಲಿ ಅವರಿಗೆ 50ರ ಗಡಿ ಮುಟ್ಟಲು ಇನ್ನೊಂದು ರನ್ ಬೇಕಿತ್ತು. ಇನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಜೊತೆಗೆ ಮತ್ತು ನಂತರ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಅವರಿಗೆ ಅರ್ಧಶತಕ ಪೂರೈಸುವ ಅವಕಾಶ ಸಿಗಬೇಕಿತ್ತು‘ ಎಂದು ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ತಮ್ಮ ಯುಟ್ಯೂಬ್ ವಾಹಿನಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಕೆಲವು ಕ್ರಿಕೆಟ್‌ ಅಭಿಮಾನಿಗಳೂ ಹಾರ್ದಿಕ್ ಅವರನ್ನು ಟೀಕೆ ಮಾಡಿದ್ದಾರೆ. ಇನಿಂಗ್ಸ್‌ನಲ್ಲಿ ಇನ್ನೂ 13 ಎಸೆತಗಳು ಬಾಕಿಯಿದ್ದವು. ಉದಯೋನ್ಮುಖ ಆಟಗಾರನಿಗೆ ಅವಕಾಶ ನೀಡಿದ್ದರೆ ಉತ್ತಮ ನಾಯಕ ಎನಿಸಿಕೊಳ್ಳಬಹುದಿತ್ತಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಇಂತಹದೇ ಸನ್ನಿವೇಶದಲ್ಲಿ ಆಗಿನ ನಾಯಕ ಮಹೇಂದ್ರಸಿಂಗ್ ಧೋನಿ ಅವರು ದಕ್ಷಿಣ ಆಫ್ರಿಕಾ ಎದುರಿನ ಟಿ20 ಪಂದ್ಯದಲ್ಲಿ ತಮಗೆ ವಿಜಯದ ರನ್ ಹೊಡೆಯುವ ಅವಕಾಶವಿದ್ದ ಎಸೆತವನ್ನು ಪ್ರಜ್ಞಾಪೂರ್ವಕವಾಗಿ ರಕ್ಷಣಾತ್ಮಕವಾಗಿ ಆಡಿದ್ದರು. ಇನ್ನೊಂದು ಬದಿಯಲ್ಲಿದ್ದ ವಿರಾಟ್ ಕೊಹ್ಲಿ ನಂತರದ ಓವರ್‌ನಲ್ಲಿ ಗೆಲುವಿನ ಹೊಡೆತ ಆಡುವ ಅವಕಾಶ ನೀಡಿದ್ದರು. ಆ ಘಟನೆಯನ್ನೂ ನೆನಪಿಸಿಕೊಂಡಿರುವ ಅಭಿಮಾನಿಗಳೂ ‘ಹಾರ್ದಿಕ್, ಧೋನಿಯ ಮಟ್ಟವನ್ನು ಮುಟ್ಟಲು ಬಹಳ ದೂರ ಕ್ರಮಿಸಬೇಕಿದೆ‘ ಎಂದು ವ್ಯಂಗ್ಯವಾಡಿದ್ದಾರೆ.

ಭಾರತ ತಂಡವು ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತಿತ್ತು. ಮೂರನೇಯದ್ದರಲ್ಲಿ ಗೆದ್ದಿದೆ. ವಿಂಡೀಸ್ 2–1ರಿಂದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT