ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳ ರಕ್ಷಣೆ ಕಾಯಕದಲ್ಲಿ ‘ಫೇಸ್‌ಬುಕ್‌ ಗೆಳೆಯರು’

Last Updated 12 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಈ ಊರಲ್ಲಿ ಎಂದೋ ಕಟ್ಟಿದ ಕೋಟೆಯ ಕಲ್ಲುಗಳು ಈಗ ಎಮ್ಮೆ-ದನ ಕಟ್ಟುವ ಗೂಟಗಳಾಗಿವೆ. ಊರನ್ನು ಸುತ್ತಾಡಿ ಬಂದರೆ ಕೋಟೆ, ಕಲ್ಯಾಣಿ, ದ್ವಾರಬಾಗಿಲು, ಮಠ, ಅರಮನೆ, ಶಿವಲಿಂಗಗಳು, ಮಗ್ಗುಲಾಗಿ ಬಿದ್ದ ಶಾಸನಗಳು ಸೇರಿದಂತೆ ಪಟ್ಟಿ ಮಾಡುವಷ್ಟು ಶಿಥಿಲಗೊಂಡ ಸ್ಮಾರಕಗಳು ಸಿಗುತ್ತವೆ. ಗುಬುರು ಹಾಕಿಕೊಂಡ ಮುಳ್ಳು ಕಂಟಿಯ ಬಳ್ಳಿಗಳೊಳಗೆ ಇನ್ನೂ ಅಸಂಖ್ಯ ಸ್ಮಾರಕಗಳು ಇರುವಂತೆ ಕಾಣುತ್ತಿದೆ.

ಇದು ತುಮಕೂರು ಜಿಲ್ಲೆ ಹಾಗಲವಾಡಿ ಗ್ರಾಮದ ಕಥೆ. ತಮ್ಮೂರಿನ ಐತಿಹಾಸಿಕ ತಾಣಗಳ ಈ ಅವಸ್ಥೆ ಅರಿತ ಆ ಗ್ರಾಮದ ಯುವಕರ ತಂಡ ಅವುಗಳ ಪುನಶ್ಚೇತನಕ್ಕೆ ಮುಂದಾಗಿದೆ. ಮೂವತ್ತು ಸದಸ್ಯರ ಈ ಗುಂಪು ಪ್ರತಿ ಭಾನುವಾರ ಶ್ರಮದಾನದ ಮೂಲಕ ಸ್ಮಾರಕಗಳನ್ನು ಸ್ವಚ್ಛಗೊಳಿಸುತ್ತಿದೆ. ಈ ಸ್ಮಾರಕ ಸಂರಕ್ಷಣಾ ಅಭಿಯಾನ 11ನೇ ವಾರಕ್ಕೆ ಕಾಲಿಟ್ಟಿದೆ. ಈ ಮಹತ್ಕಾರ್ಯಕ್ಕೆ ಸಾಥ್ ನೀಡಿದ್ದು ‘ಫೇಸ್‌ಬುಕ್‌’.

ಪ್ರತಿ ಭಾನುವಾರದ ಕಾಯಕ

ಓದು, ಉದ್ಯೋಗ ಎಂದು ಊರಿಂದ ದೂರವಿರುವ ಯುವಕರು, ಫೇಸ್‌ಬುಕ್ ಗ್ರೂಪ್ ಮೂಲಕ ಒಟ್ಟಾಗಿ, ಈ ಕೆಲಸ ಆರಂಭಿಸಿದ್ದಾರೆ. ಈ ಗುಂಪಿಗೆ ಸ್ಥಳೀಯ ‘ಸ್ನೇಹಜೀವಿ ಬಳಗ’ ಹಾಗೂ ಭಜರಂಗಿ ಸಂಘಟನೆಯವರು ಸಾಥ್ ನೀಡಿದ್ದಾರೆ. ಐಟಿಐ, ಡಿಪ್ಲೊಮಾ, ಪದವಿ ಓದುತ್ತಿರುವ ಶ್ರೀನಿವಾಸ್, ಶಿವರಾಜು, ಶಂಕರ್, ಮಹೇಶ್, ರವಿಕುಮಾರ್, ಲೋಕೇಶ್, ಮಧುಸೂಧನ್, ಸುಪ್ರಿತ್, ಕಿರಣ್, ಚೇತನ್ ಕುಮಾರ್, ಸಂತೋಷ್, ದೀಪಕ್, ಅಜಯ್, ಯಶವಂತ, ರಂಗನಾಥ್ ಮತ್ತಿತರ ಸ್ನೇಹಿತರು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ನಿಂತಿದ್ದಾರೆ.

ಮನೆಯಲ್ಲೇ ಉಪಾಹಾರ ಮುಗಿಸಿಕೊಂಡು ಬೆಳಿಗ್ಗೆ 9ಕ್ಕೆ ಒಂದೆಡೆ ಸೇರುವ ಈ ತಂಡದ ಸದಸ್ಯರು, ಜೊತೆಗಾರ ಕೃಷ್ಣಮೂರ್ತಿ ಮನೆಯಿಂದ ಕುಡುಗೋಲು, ಗುದ್ದಲಿ, ಪಿಕಾಸಿ, ಚಲಿಕೆ, ಕೊಡ್ಲಿ, ರೋಟಿ, ಮಂಕರಿ ಪಡೆದು ಸ್ವಚ್ಛತೆಗೆ ಇಳಿಯುತ್ತಾರೆ. ಸ್ವಂತ ಖರ್ಚಿನಲ್ಲೆ ಮಧ್ಯಾಹ್ನದ ಊಟ, ನಡುನಡುವೆ ಟೀ-ಬಿಸ್ಕೇಟ್. ಸಂಜೆ 5ರವರೆಗೆ ಮತ್ತೆ ಸ್ವಚ್ಛತಾ ಕಾರ್ಯ ಮುಂದುವರಿಯುತ್ತದೆ.

ಈಗಾಗಲೇ ಕೋಟೆಯ ಹೆಬ್ಬಾಗಿಲು(ದೊಡ್ಡೂರುಬಾಗಿಲು), ಕೋಟೆಯ ಎರಡನೇ ದ್ವಾರ(ಊರು ಬಾಗಿಲು), ಅಳಿದುಳಿದ ಅರಮನೆ, ಕೋಟೆ, ಗುರುಪಾದಸ್ವಾಮಿ ಮಠ, ಗುರುಪಾದಸ್ವಾಮಿ ಗದ್ದುಗೆ, ನಿರಂಜನಸ್ವಾಮಿಗಳ ಕೂಗುಮಠ(ಕೂಗೋ ಮಂಟಪ)ಕ್ಕೆ ಸುತ್ತಿಕೊಂಡ ಬೇಲಿಬಂಕ (ಬಳ್ಳಿಗಳು) ಬಿಡಿಸಿದ್ದಾರೆ.

ಇಲ್ಲಿ ಮಠಗಳಷ್ಟೇ ಅಲ್ಲ, ಮಠಾಧಿಪತಿಗಳ ಗದ್ದುಗೆಗಳೂ ಇವೆ. ಬಿಸಿಲು ಮಲ್ಲಪ್ಪನ ದೇವಸ್ಥಾನದ ಹತ್ತಿರ ಕಟ್ಟೆಯಲ್ಲಿ ಎರಡು ಶಿವಲಿಂಗ, ಒಂದು ಶಾಸನ ಇದೆ. ಉಳಿದ ಲಿಂಗಗಳು ನಾಪತ್ತೆಯಾಗಿವೆ. ಸಮೀಪದ ಸೋಮೇಶ್ವರ ದೇವಸ್ಥಾನ ಹತ್ತಿರ ಎರಡು ಶಾಸನಗಳು ಮಗ್ಗುಲಾಗಿ ಬಿದ್ದಿವೆ. ಸ್ವಚ್ಛತೆ ಮಾಡಿಕೊಟ್ಟರೆ ಅಳಿದುಳಿದ ಸ್ಮಾರಕಗಳು ನಿಧಿ ಕಳ್ಳತನಕ್ಕೆ ಒಳಗಾಗಿ ಹಾಳಾಗುತ್ತದೆಂಬ ಭಯ ಈ ಯುವಕರಲ್ಲಿ ಕಾಡುತ್ತಿದೆ.

ಚರ್ಚೆ ಬಿಟ್ಟು ಕಾಯಕಕ್ಕೆ...

ಆರಂಭದಲ್ಲಿ ಯುವಕರು ಫೇಸ್‌ಬುಕ್‌ನಲ್ಲೇ ಊರಿನ ಅವಸ್ಥೆ ಸರಿಪಡಿಸುವ ಬಗ್ಗೆ ಚರ್ಚೆ ಆರಂಭಿಸಿದರು. ‘ಬರೀ ಮಾತು, ಚರ್ಚೆಯಲ್ಲಿ ಏನೂ ಆಗುವುದಿಲ್ಲ’ ಎಂದು ತೀರ್ಮಾನಿಸಿದ ಅವರು, ಮೊದಲು ಸ್ಮಾರಕಗಳಿರುವ ತಾಣಗಳನ್ನು ಗುರುತಿಸಿದರು. ಅವುಗಳನ್ನು ಹಂತ ಹಂತವಾಗಿ ಸ್ವಚ್ಛಗೊಳಿಸುತ್ತಾ ಹೊರಟರು. ‘ಇತಿಹಾಸವನ್ನು ಕೇಳುವಾಗ ಹಾಗಲವಾಡಿ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು. ಅದೇ ಹೆಮ್ಮೆಯನ್ನು ಪುನಃ ಸ್ಥಾಪಿಸಬೇಕಿದೆ. ಹಾಗಾಗಿ ಈ ಶ್ರಮದಾನಕ್ಕೆ ಕೈ ಹಾಕಿದ್ದೇವೆ. ಇಲ್ಲಿನ ಗ್ರಾಮಪಂಚಾಯಿತಿಯೂ ಕೈ ಜೋಡಿಸಿದರೆ ಒಳಿತಾಗಲಿದೆ’ ಎಂದು ಭಜರಂಗಿ ತಂಡದ ಶ್ರೀನಿವಾಸ್ ಅಭಿಪ್ರಾಯಪಡುತ್ತಾರೆ.

‘ಯಾರ್ ಏನೇ ಅಂದ್ರೂ, ನಮ್ಮ ಕೈಲಾದ ಕೆಲಸ ಮಾಡುತ್ತೇವೆ’ ಎನ್ನುವ ಈ ಯುವಕರು ನಮ್ಮ ಕಾರ್ಯಕ್ಷಮತೆಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೂ ಇಲ್ಲಿನ ದೊಡ್ಡ ಎರಡು ಕಲ್ಯಾಣಿಗಳು, ಒಂದು ಪುಟ್ಟ ಕಲ್ಯಾಣಿ ಇದೆ. ಪಾಳೆಗಾರರ ಕಾಲದಲ್ಲಿ ಇವು ಕುಡಿಯುವ ನೀರಿನ ಮೂಲವಾಗಿದ್ದವು. ಈಗ ತ್ಯಾಜ್ಯಸುರಿಯುವ ಗುಂಡಿಗಳಾಗಿವೆ. ಇವುಗಳನ್ನು ಸ್ವಚ್ಛಮಾಡಲು ಸಾಕಷ್ಟು ಹಣ ಬೇಕು. ರಾಜ್ಯ ಪುರಾತತ್ವ ಲಾಖೆಗೆ ಪತ್ರ ಬರೆಯುವ ಮೂಲಕ ಗಮನಸೆಳೆಯುತ್ತೇವೆ ಎನ್ನುತ್ತಾರೆ ತಂಡದ ಸದಸ್ಯರು.

ಸ್ವಚ್ಛತೆಯಲ್ಲಿ ತೊಡಗಿರುವ ಹಾಗಲವಾಡಿ ಸ್ನೇಹಜೀವಿ ಯುವಕರು
ಸ್ವಚ್ಛತೆಯಲ್ಲಿ ತೊಡಗಿರುವ ಹಾಗಲವಾಡಿ ಸ್ನೇಹಜೀವಿ ಯುವಕರು

ಹೊಗಳಿಕೆ–ತೆಗಳಿಕೆ ಬದಿಗಿಟ್ಟು...

ಹೀಗೆ ಊರಿನ ಸ್ವಚ್ಛತೆಗೆ ನಿಂತ ಈ ಹುಡುಗರನ್ನು ‘ಇವರಿಗೆಲ್ಲೋ ತಲೆಕೆಟ್ಟಿದೆ’ ಎಂದು ಅಣಕಿಸುವವರಿದ್ದಾರೆ. ‘ಪಂಚಾಯಿತಿಯವರಂತೂ ಸ್ವಚ್ಛಮಾಡ್ಲಿಲ್ಲ. ನೀವಾದ್ರೂ ಮಾಡ್ತಿದ್ದೀರಲ್ಲಾ’ ಎಂದು ಪ್ರಶಂಸಿಸುವವರೂ ಇದ್ದಾರೆ. ‘ಹೊಗಳಿಕೆ-ತೆಗಳಿಕೆ ನಮ್ಮ ಈ ಕಾರ್ಯಕ್ಕೆ ಅಡ್ಡಿಯಾಗಬಾರದು. ನಮ್ಮೂರಿನ ಸ್ಮಾರಕಗಳು, ಶಾಸನಗಳು ರಕ್ಷಣೆಯಾಗಬೇಕು, ಅಷ್ಟೇ’ ಎನ್ನುತ್ತಾರೆ ಯುವಕ ಶಿವರಾಜ್. ‘ಹಾಗಲವಾಡಿಯ ಬೇಲಿಗಳಲ್ಲಿ ಇನ್ನು ಅದೆಷ್ಟು ಇತಿಹಾಸದ ಕುರುಗಳಿವೆಯೋ, ಗೊತ್ತಿಲ್ಲ. ಈಗ ಕತ್ತಲಮಲ್ಲಪ್ಪ, ಬಿಸಿಲು ಮಲ್ಲಪ್ಪನ ದೇವಸ್ಥಾನಕ್ಕೆ ಹೋಗುವ ಬಲಭಾಗದ ಬೇಲಿಯಲ್ಲಿ ಶಿಲಾ ಶಾಸನವೊಂದಿದೆ. ಇದನ್ನು ಸಂರಕ್ಷಿಸುವ ಅಗತ್ಯವಿದೆ’ ಎನ್ನುತ್ತಾರೆ ಎಂ.ಎನ್.ಕೋಟೆಯ ಉಪನ್ಯಾಸಕ ಎಂ.ಜೆ.ಶೇಷಪ್ಪ.

’ಅಭಿವೃದ್ಧಿ ಎಂದರೆ ರಸ್ತೆ, ಚರಂಡಿ ಆಗುವುದಷ್ಟೇ ಅಲ್ಲ. ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಬರುವಂತೆ ನೋಡಿಕೊಂಡರೆ ಸಾಕಷ್ಟು ಅಭಿವೃದ್ಧಿ ಕಾಣಬಹುದು’ ಎನ್ನುತ್ತಾರೆ ಹಾಗಲವಾಡಿ ಗ್ರಾಮದ ಭಜರಂಗಿ ಸಂಘದ ಮುಖ್ಯಸ್ಥ ಶ್ರೀನಿವಾಸ್.

**

ಕೋಟೆ ಸುತ್ತಾ ಏನೇನಿದೆ ?

ಹಾಗಲವಾಡಿ ಪ್ರದೇಶದಲ್ಲಿ ಕ್ರಿ.ಶ.1478 ರಿಂದ 1776ರವರೆಗೆ 13 ಪಾಳೆಗಾರರು ಆಳಿ ಹೋಗಿದ್ದಾರೆ. ಅವರಲ್ಲಿ 1720ಕ್ಕೆ ಪಟ್ಟಕ್ಕೆ ಬಂದ ಇಮ್ಮಡಿ ಮುದಿಯಪ್ಪನಾಯಕ ಹಾಗಲವಾಡಿ ಚರಿತ್ರೆಯಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಇಂಥ ಪಾಳೆಗಾರರು ಕಟ್ಟಿದ 70ಅಡಿ ಎತ್ತರದ ಕೋಟೆಯ ಬುರುಜು ಜನಾಕರ್ಷಣೆ ಕೇಂದ್ರ. ಈ ಕೋಟೆಗೆ ಎರಡು ಹೆಬ್ಬಾಗಿಲಿದೆ. ಕೋಟೆ ಆಸುಪಾಸಿನಲ್ಲಿ ಹಲವು ದೇವಸ್ಥಾನ, ಗದ್ದುಗೆಗಳಿವೆ. ಇಂಥ ಅನೇಕ ಸಂಗತಿಗಳ ಬಗ್ಗೆ ಲೇಖನಗಳು ಬೆಳಕು ಚೆಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT