ಕೊಪ್ಪಳ: ಇಲ್ಲಿನ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರೋಗನಿಧಾನ ಶಾಸ್ತ್ರ ವಿಭಾಗದಲ್ಲಿ ಬುಧವಾರ ರೆಡ್ ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಶ್ವ ರೆಡ್ ಕ್ರಾಸ್ ದಿನ ಹಾಗೂ ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಿಸಲಾಯಿತು.
ಡ್ಯೂನಾಂಟ್ ಅವರ ಭಾವಚಿತ್ರಕ್ಕೆ ಥಲಸ್ಸೇಮಿಯಾದಿಂದ ಬಳಲುತ್ತಿರುವ ರೋಗಿ ಕುಮಾರ ಸಿದ್ದಾರ್ಥ ಹಾಗೂ ಅತಿಥಿಗಳಿಂದ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಸಜ್ಜನ ಮಾತನಾಡಿ ‘ಮಾನವೀಯತೆಯನ್ನು ಜೀವಂತವಾಗಿರುವು ಎಂಬುದು ಈ ಸಲದ ಧ್ಯೇಯವಾಕ್ಯವಾಗಿದ್ದು, ಥಲಸ್ಸೇಮಿಯಾ ರೋಗಿಗಳಿಗೆ ಪ್ರತಿ ತಿಂಗಳು ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು’ ಎಂದು ರಕ್ತದಾನಿಗಳಿಗೆ ಕರೆ ನೀಡಿದರು.
ಕಿಮ್ಸ್ ರೋಗನಿಧಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿರುದ್ಧ ವಿ. ಕುಷ್ಟಗಿ, ಸಹ ಪ್ರಾಧ್ಯಾಪಕ ಡಾ. ವಿನಯ, ಸಹಾಯಕ ಪ್ರಾಧ್ಯಾಪಕರಾದ ಡಾ. ಹೇಮಾವತಿ, ಡಾ. ಧನ್ಯ ಕೆ., ವೈದ್ಯಕೀಯ ವಿದ್ಯಾಋ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.