ಪಾಂಡವಪುರ: ‘ವಿಶ್ವೇಶ್ವರಯ್ಯ ನಾಲಾ (ವಿ.ಸಿ.ನಾಲೆ) ಆಧುನೀಕರಣ ಕಾಮಗಾರಿಯನ್ನು ತ್ವರಿಗತಿಯಲ್ಲಿ ಮುಗಿಸಿ ಜೂನ್ ತಿಂಗಳಲ್ಲಿ ನಾಲೆಗೆ ನೀರು ಹರಿಸದಿದ್ದರೆ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಮಗಾರಿ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜೂನ್ನಿಂದ ನಾಲೆಗೆ ನೀರು ಹರಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನೀರಲ್ಲದೆ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಲಕ್ಷಾಂತರ ತೆಂಗಿನ ಮರಗಳು ಸಂಪೂರ್ಣ ಒಣಗಿ ಸುಳಿಗಳು ಸತ್ತುಹೋಗಿವೆ. ಅಡಿಕೆ ಮರಗಳದ್ದು ಇದೇ ಪರಿಸ್ಥಿತಿ. ಅಡಿಕೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಿ ಸರ್ಕಾರ ಪರಿಹಾರ ನೀಡಬೇಕು. ಎಂಟತ್ತು ವರ್ಷ ಕಷ್ಟ ಪಟ್ಟು ಬೆಳೆದ ಅಡಿಕೆ ಮರಗಳನ್ನು ಒಣಗುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ಸರ್ಕಾರ ಈಗ ಕೊಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಸರ್ಕಾರ ಎಕರೆಗೆ ಕನಿಷ್ಟ ₹30ಸಾವಿರ ಪರಿಹಾರ ಘೋಷಿಸಬೇಕು. ಬರಗಾಲದಿಂದ ಜಿಲ್ಲೆಯ ಎಲ್ಲಾ ಕೆರೆಗಳು ಬತ್ತಿ ಹೋಗಿದ್ದು ಕೆರೆಗಳ ಹೂಳು ಎತ್ತಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಒಂದರ ಹಿಂದೆ ಒಂದು ಚುನಾವಣೆಗಳು ಬರುತ್ತಿದ್ದು, ಸರ್ಕಾರ ಚುನಾವಣೆಗಳ ಬಗ್ಗೆ ಗಮನಹರಿಸಿದರೆ ರೈತರ ಕಷ್ಟ ಕೇಳುವವರು ಯಾರು? ನಾಲೆಗಳಿಗೆ ನೀರು ಹರಿಸಲು ಕ್ರಮವಹಿಸದಿದ್ದರೆ ಜಿಲ್ಲೆಯ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ’ ಎಂದರು.
ಮುಖಂಡರಾದ ಕೆ.ಎಂ.ಯೋಗೇಶ್,ಬಿ.ಸಿ.ನಾಗೇಂದ್ರ, ಶ್ರೀನಿವಾಸ್, ದಯಾನಂದ, ಶ್ರೀಕಂಠೇಗೌಡ ಇದ್ದರು.