ಗುವಾಹಟಿ: ಪಾಕಿಸ್ತಾನದಲ್ಲೇನಾದರೂ ಚುನಾವಣೆ ನಡೆದರೆ ರಾಹುಲ್ ಗಾಂಧಿ ಜಯ ಸಾಧಿಸುತ್ತಾರೆ. ಆದರೆ, ಭಾರತದಲ್ಲಿ ಜಯ ಗಳಿಸುವುದು ನರೇಂದ್ರ ಮೋದಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಅಸ್ಸಾಂನ ಬಾರ್ಪೆಟಾದಲ್ಲಿ ಶುಕ್ರವಾರ ರ್ಯಾಲಿ ನಡೆಸಿದ ಅವರು, ‘ರಾಹುಲ್ ಪಾಕಿಸ್ತಾನದಲ್ಲಿ ತುಂಬಾ ಜನಪ್ರಿಯ. ಅಲ್ಲಿ ಚುನಾವಣೆ ನಡೆದು, ಅವರು ಸ್ಪರ್ಧಿಸಿದರೆ ಭಾರಿ ಅಂತರದೊಂದಿಗೆ ಗೆಲ್ಲುತ್ತಾರೆ. ನಾವು ಅವರಿಗೆ ಕೈ ಎತ್ತಿ ಶರಣಾಗುತ್ತೇವೆ’ ಎಂದು ಲೇವಡಿ ಮಾಡಿದರು.
ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಗುರುವಾರ ರಾಹುಲ್ ಗಾಂಧಿ ವಿಡಿಯೊ ಹಂಚಿಕೊಂಡು ಅವರನ್ನು ಶ್ಲಾಘಿಸಿ, ಬಿಜೆಪಿಯನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ಶರ್ಮ, ‘ಪಾಕಿಸ್ತಾನ ಬಯಸಿದಂತೆ ಭಾರತದಲ್ಲಿ ಏನೂ ಆಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾದದ್ದು ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಸ್ಸಾಂನಲ್ಲಿ ಅಪ್ರಸ್ತುತ ಮತ್ತು ಅವರ ಕಾಲಾವಧಿ ಮುಗಿದಿದೆ ಎಂದರು. ‘ಅಸ್ಸಾಂನಲ್ಲಿ ಮಾಫಿಯಾ ರಾಜ್ ಇದೆ’ ಎಂದು ಪ್ರಿಯಾಂಕಾ ಗಾಂಧಿ ಮಾಡಿದ್ದ ಆರೋಪವನ್ನು ನಿರಾಕರಿಸಿದ ಹಿಮಂತ, ‘ರಾಜ್ಯದಾದ್ಯಂತ ಶಾಂತಿ ನೆಲೆಸಿದ್ದು, ಎಲ್ಲ ಕಲ್ಯಾಣ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ’ ಎಂದು ಪ್ರತಿಪಾದಿಸಿದರು.
ಬಿಜೆಪಿ ವಾಷಿಂಗ್ ಮಷಿನ್ ಎಂಬ ಲೇವಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಅತಿ ದೊಡ್ಡ, ಹೈ ವೋಲ್ಟೇಜ್ ವಾಷಿಂಗ್ ಮಷಿನ್ ಆಗಿದ್ದು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಸ್ವಚ್ಛಗೊಳಿಸಲು ಅದನ್ನು ಬಳಸಲಾಗಿದೆ’ ಎಂದು ಹೇಳಿದರು.