ಮೈಸೂರು: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲುವುದು ಗ್ಯಾರಂಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ’ ಎಂಬ ಜೆಡಿಎಸ್ನವರ ಹೇಳಿಕೆಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಮಂಡ್ಯಕ್ಕೆ ಕುಮಾರಸ್ವಾಮಿ ಹೊಸ ಮುಖ ಅಲ್ಲವೇ, ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಮಗನೇ (ನಿಖಿಲ್ ಕುಮಾರಸ್ವಾಮಿ) ಸೋಲಲಿಲ್ಲವೇ? ಮುಖ್ಯಮಂತ್ರಿ ಆಗಿದ್ದಾಗಲೇ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈಗ ಅವರು ಗೆಲ್ಲುತ್ತಾರೆಯೇ?’ ಎಂದು ಕೇಳಿದರು.
‘ನಮ್ಮ ಅಭ್ಯರ್ಥಿ ಮಂಡ್ಯದವರು. ಕುಮಾರಸ್ವಾಮಿ ಹಾಸನದವರು’ ಎಂದರು.
‘ಅಲ್ಲಿನ ಈಗಿನ ಸಂಸದೆ ಸುಮಲತಾ ಜೊತೆ ನಾನು ಚರ್ಚೆ ಮಾಡಿಲ್ಲ. ನಮ್ಮ ಅಭ್ಯರ್ಥಿಯೇ ಸ್ಟ್ರಾಂಗ್ ಇದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ನಾವು ಸೋಲಿಸುತ್ತೇವೆ’ ಎಂದು ಹೇಳಿದರು.
‘ಕೋಲಾರದಲ್ಲಿ ಸಚಿವರು ಹಾಗೂ ಶಾಸಕರ ನಡುವೆ ಅಸಮಾಧಾನ ಇರುವುದು ಸತ್ಯ. ದಲಿತರಲ್ಲಿ ಎಡಗೈ ಬದಲು ಬಲಗೈ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂಬುದು ಅಲ್ಲಿನವರ ಒತ್ತಾಯ. ನಾನೂ ಮುಖಂಡರ ಜೊತೆ ಮಾತನಾಡಿದ್ದು, ಸಮಾಧಾನದಿಂದ ಇರುವಂತೆ ಹೇಳಿದ್ದೇನೆ. ಅಲ್ಲಿಗೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೂ ಎಡಗೈ ಅವರಿಗೆ ಕೊಡಬಹುದೆಂದು ಭಯಪಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.