ಮುಂಬೈ: ‘ಮಹಾರಾಷ್ಟ್ರದ ಎಟಿಎಸ್ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಸತ್ತಿದ್ದು ಪಾಕಿಸ್ತಾನದ ದಾಳಿಕೋರ ಮೊಹಮ್ಮದ್ ಅಜ್ಮಲ್ ಕಸಬ್ ಹಾರಿಸಿದ ಗುಂಡಿನಿಂದ ಅಲ್ಲ. ಅವರು ಸತ್ತಿದ್ದು ಆರ್ಎಸ್ಎಸ್ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿನಿಂದ’ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ಸಿಗ ವಿಜಯ್ ವಡೆಟ್ಟೀವಾರ್ ಶನಿವಾರ ಆರೋಪಿಸಿದ್ದಾರೆ.
‘ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಉಜ್ವಲ್ ನಿಕಂ ಒಬ್ಬ ವಿಶ್ವಾಸಘಾತುಕನಾಗಿದ್ದು, ಈ ಸತ್ಯವನ್ನು ಮುಚ್ಚಿಟ್ಟರು. ಅಂಥ ವಿಶ್ವಾಸಘಾತುಕನಿಗೆ ಬಿಜೆಪಿ ಚುನಾವಣಾ ಟಿಕೆಟ್ ನೀಡಿದೆ’ ಎಂದು ಹೇಳಿದರು.
ತಮ್ಮ ಹೇಳಿಕೆ ಬಗ್ಗೆ ಭಾನುವಾರ ಕೊಲ್ಲಾಪುರದಲ್ಲಿ ಸ್ಪಷ್ಟನೆ ನೀಡಿದ ವಿಜಯ್, ‘ಮಾಜಿ ಪೊಲೀಸ್ ಅಧಿಕಾರಿ ಎಸ್.ಎಂ.ಮುಶ್ರಿಫ್ ಅವರು ಬರೆದಿರುವ ಪುಸ್ತಕದಲ್ಲಿ ಇರುವುದನ್ನು ನಾನು ಹೇಳಿದ್ದೇನೆ’ ಎಂದರು.
ವಡೆಟ್ಟೀವಾರ್ ಆರೋಪವನ್ನು ಉಜ್ವಲ್ ನಿಕಂ ನಿರಾಕರಿಸಿದ್ದು, ಆಧಾರರಹಿತ ಆರೋಪದಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ. ವಡೆಟ್ಟೀವಾರ್ ಹೇಳಿಕೆಯು ಮಹಾರಾಷ್ಟ್ರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದುದರಿಂದ ಈ ಹೇಳಿಕೆ ಪಕ್ಷಕ್ಕೆ ಭಾರಿ ಮುಜುಗರದ ಉಂಟುಮಾಡಿದೆ.