ಮಂಡ್ಯ: ‘ಮುಂದಿನ ಐದು ವರ್ಷಗಳಲ್ಲಿ ಕಾವೇರಿ, ಮೇಕೆದಾಟು, ಕೃಷ್ಣ, ಭದ್ರ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿ ರಾಜ್ಯದ ಜನರಿಗೆ ನ್ಯಾಯ ನೀಡಲು ನನ್ನಿಂದ ಸಾಧ್ಯವಾಗದಿದ್ದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ’ ಎಂದು ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪ್ರತಿಪಾದಿಸಿದರು.
ಚುನಾವಣಾ ರ್ಯಾಲಿ ವೇಳೆ ಮಾತನಾಡಿ, ‘ನಾನು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿಲ್ಲ, ಮಂಡ್ಯ ಕ್ಷೇತ್ರದ ಪ್ರತಿ ಮನೆಯ ಮಗನಾಗಿ ಕಣಕ್ಕೆ ಬಂದಿದ್ದೇನೆ. ಕಾಂಗ್ರೆಸ್ ದುರಾಡಳಿತದಲ್ಲಿ ರಾಜ್ಯದ ಜನರ ಬದುಕು ಸರಿಪಡಿಸುವ, ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ’ ಎಂದರು.
‘2018ರ ಚುನಾವಣೆ ವೇಳೆ ನಮ್ಮನ್ನು ಬಿಜೆಪಿ ಬಿ ಟೀಂ ಎಂದಿದ್ದಿರಿ, ಆದರೂ ನಮ್ಮ ಮನೆ ಬಾಗಿಲಿಗೆ ಬಂದಿರಿ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಎಚ್.ಡಿ.ದೇವೇಗೌಡರು ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರು ಬಲವಂತವಾಗಿ ನನಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದರು, ನಂತರ ಕಿರುಕುಳ ಕೊಟ್ಟು ಕೆಳಗಿಳಿಸಿದರು’ ಎಂದರು.
‘ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ತಮಿಳುನಾಡಿನ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಹೋಗಿ ಆ ಘೋಷಣೆಯನ್ನು ತೆಗೆಸಿದರೆ ಪ್ರಧಾನಿ ಮೋದಿ ಅವರ ಮನವೊಲಿಸಿ ಕೇವಲ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತೇವೆ’ ಎಂದರು.