ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಅಪರಾಧದ ಆದಾಯದಲ್ಲಿ ಎಎಪಿ ಪ್ರಮುಖ ಫಲಾನುಭವಿ ಆಗಿದ್ದು, ಅದರ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮೂಲಕ ಹಣ ಅಕ್ರಮ ವರ್ಗಾವಣೆ ಅಪರಾಧ ಎಸಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಎಎಪಿ 2022ರ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸುಮಾರು ₹45 ಕೋಟಿ ನಗದು ಬಳಸಿದ್ದು, ಅದು ಈ ಅಪರಾಧದ ಅದಾಯದ ಒಂದು ಭಾಗವಾಗಿದೆ ಎಂಬುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ. ಈ ನಗದನ್ನು ಸಮೀಕ್ಷಾ ಕೆಲಸಗಾರರು, ಪ್ರದೇಶಗಳ ವ್ಯವಸ್ಥಾಪಕರು ಮತ್ತು ವಿಧಾನಸಭಾ ಕ್ಷೇತ್ರಗಳ ವ್ಯವಸ್ಥಾಪಕರು ಸೇರಿದಂತೆ ಹಲವರಿಗೆ ಪಾವತಿಸಲಾಗಿದೆ ಎಂದು ಹೇಳಿದೆ. ಈ ಸಂಬಂಧ ಇ.ಡಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
‘ಈ ರೀತಿ ಎಎಪಿಯು ಕೇಜ್ರಿವಾಲ್ ಅವರ ಮೂಲಕ ಹಣ ವರ್ಗಾವಣೆಯ ಅಪರಾಧ ಮಾಡಿದೆ. ಈ ಅಪರಾಧಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) 2002ರ ಸೆಕ್ಷನ್ 70ರ ವ್ಯಾಪ್ತಿಗೆ ಬರುತ್ತವೆ’ ಎಂದು ಇ.ಡಿ ಹೇಳಿದೆ.
ಎಎಪಿಯ ರಾಷ್ಟ್ರೀಯ ಸಂಚಾಲಕರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ಬಳಸಲಾದ ಹಣಕ್ಕೆ ಅಂತಿಮವಾಗಿ ಜವಾಬ್ದಾರರಾಗಿದ್ದಾರೆ. ಕೇಜ್ರಿವಾಲ್ ಅವರು ಎಎಪಿಯ ಹಿಂದಿನ ಮಿದುಳು ಮಾತ್ರವಲ್ಲದೇ, ಅದರ ಪ್ರಮುಖ ಚಟುವಟಿಕೆಗಳ ನಿಯಂತ್ರಕರೂ ಆಗಿದ್ದಾರೆ. ದೆಹಲಿ ಅಬಕಾರಿ ನೀತಿ ನಿರ್ಧರಿಸುವಲ್ಲಿ ಅವರು ಭಾಗಿಯಾಗಿದ್ದರು ಎಂಬುದು ಸಾಕ್ಷಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ಅದು ತಿಳಿಸಿದೆ.
ಇ.ಡಿ ಸಲ್ಲಿಸಿರುವ ಅಫಿಡವಿಟ್ಗೆ ಪ್ರತಿಕ್ರಿಯಿಸಿರುವ ಎಎಪಿ, ‘ತನಿಖಾ ಸಂಸ್ಥೆಯು ಸುಳ್ಳು ಹೇಳುವ ಯಂತ್ರವಾಗಿದೆ’ ಎಂದು ಆರೋಪ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.