ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಪರ್ಮೇಶಿ ಮಾಡಿದ ಸಾಕ್ಷಾತ್ ಸಮೀಕ್ಷೆಯ ವರದಿ ಹೀಗಿದೆ:
ತೆನೆಯಣ್ಣ: ಸಿಇಟಿ ರಿಸಲ್ಟೇ 15 ದಿನಕ್ಕೆ ಬರುತ್ತೆ, ಅಂತಾದ್ರಲ್ಲಿ ಎಲೆಕ್ಷನ್ ರಿಸಲ್ಟ್ ಇಷ್ಟು ಲೇಟಾದ್ರೆ ಹೇಗೆ? ಈ ಒಂದು ತಿಂಗಳಲ್ಲಿ ‘ಕಣ್ಣೀರ್ ಕಣ್ಣೀರ್’ ಡಾಕ್ಯುಮೆಂಟರೀನ ಸಹಾರಾ ಡೆಸರ್ಟ್ನಲ್ಲಿ ಶೂಟ್ ಮಾಡ್ಬೇಕು ಅಂತ ಪ್ಲಾನಿದೆ.
ಮುದ್ದೇಗೌಡರು: ಕಮಲ ನಯನ ಕಮಲ ವದನ ಹಾಡು ಹಾಕ್ಕಂಡ್ರೂ ನಿದ್ದೆ ಬರ್ತಿಲ್ಲ. ಮಗರಾಮನ್ನ ಸೆಂಟರ್ ಸಾಂದರ್ಭಿಕ ಶಿಶು ಮಾಡ್ಬಿಟ್ರೆ ನನ್ನ ಎಲ್ಲಾ ಜವಾಬ್ದಾರಿ ಮುಗಿದ ಹಾಗೆ.
ಮುದ್ದರಾಮಯ್ಯ: ಹಾಳಾದ್ದು ಚೊಂಬು ಚೊಂಬು ಅಂದು ನಿದ್ದೇಲೂ ಅದನ್ನೇ ಹೇಳ್ಕೊಳೋ ಹಾಗಾಗಿದೆ. ಯಾರೋ ಮೊನ್ನೆ ಕಮಲದೋರ್ದು ಗ್ಯಾರಂಟಿ ಚೊಂಬು ಅಂದ್ರು. ಯಾಕೋ ಅವಾಗಿಂದ ಚೊಂಬು ಅಂದಿದ್ದೇ ಎಡವಟ್ಟಾಯ್ತು ಅನ್ಸಕ್ಕೆ ಶುರುವಾಗಿದೆ.
ನಾರೀಶ್ವರಪ್ಪ: ಗೆದ್ರೆ ನಮೋಗೆ ಸಪೋರ್ಟು, ಸೋತ್ರೆ ಗೆಟ್ಔಟು! ಅದಕ್ಕೆ ನಾನೇ ಕಾಶಿ ಕಡೆ ಹೋಗಿ ರಾಜಕೀಯನೇ ಬಿಟ್ ಬಂದ್ಬಿಡೋಣ ಅಂದ್ಕೊಂಡಿದೀನಿ.
ಕೇಶೀ ಕುಮಾರ್: ಹೇಗಿದ್ರೂ ಮೇಡಂ ಕಾರಣ ಕೇಳಿ ನೋಟಿಸು ಕೊಡ್ತಾರೆ. ಅದು ಮಾಮೂಲಿ! ಅದಕ್ಕೆ ಈಗ್ಲೇ ಒಂದು ಡೀಟೈಲ್ಡ್ ರಿಪೋರ್ಟ್ ರೆಡಿ ಮಾಡ್ತಿದೀನಿ. ಯಾರ್ಯಾರ ನಾಲಿಗೆಯಿಂದ ಎಷ್ಟು ವೋಟು ಹಾಳಾಗೋಯ್ತು ಅನ್ನೋದಕ್ಕೆ ಎವಿಡೆನ್ಸ್ ಕಲೆಕ್ಟ್ ಮಾಡ್ತಿದೀನಿ.
ಜಯೇಂದ್ರ: ಮೋದಿ ಮಾಮ ಬಂದ್ರೂ ನಮ್ಮೋರೇ ನಮ್ಗೆ ಗುನ್ನ ಹಾಕಿರೋದ್ರಿಂದ ಎತ್ತು ಏರಿಗೆಳೀತು, ಕ್ವಾಣ ನೀರಿಗೆಳೀತು ಅಂದಂಗಾಯ್ತು. ಆದರೂ ಕಮಲ ಮೇನೆಗೆ ತೆನೆ ಸಿಗಿಸ್ಕೊಂಡು ರಥೋತ್ಸವ ಮಾಡಿ ಉಸ್ಸಂತ ನಿಟ್ಟುಸಿರುಬಿಟ್ಟಿದೀವಿ.
ಮತದಾರ: ಸ್ವಾಮಿ! ಯಾವನು ಗೆದ್ರೇನು, ಯಾವನು ಸೋತ್ರೇನು? ಸದ್ಯಕ್ಕೆ ಯಾವ ಎಲೆಕ್ಷನ್ನೂ ಇಲ್ಲ. ಇಂಗಾದ್ರೆ ನಮ್ ಗತಿ ಏನ್ ಹೇಳಿ? ಅವ್ರು ಒಂದು ತಿಂಗ್ಳು ಕಾಯೋದು ಬಿಡಿ, ನಾವಿನ್ನೂ ನಾಕು ವರ್ಷ ಕಾಯ್ಬೇಕಲ್ಲ ಸ್ವಾಮಿ ಅದನ್ನ ಹೇಳಿ?