ರೈತರಿಗೆ ಮಳೆಯ ಅವಶ್ಯಕತೆ ಎಷ್ಟು ಇರುತ್ತದೆಯೋ, ಬಿಸಿಲೂ ಅಷ್ಟೇ ಅತ್ಯಗತ್ಯ. ಬಿಸಿಲೇ ಇಲ್ಲದಿದ್ದರೆ ಕೆಲವು ಬೆಳೆಗಳನ್ನು ಒಣಗಿಸಲಾಗದೇ ಪರಿತಪಿಸಬೇಕು. ಬಿಸಿಲಿನ ತಾಪವಿಲ್ಲದೇ ಬೆಳೆಗಳು ಕೊಳೆಯುವ ಪರಿಸ್ಥಿತಿ.
ಆದರೆ ಮಳೆ ಅಥವಾ ಚಳಿಗಾಲದಲ್ಲಿ ಬಿಸಿಲೇ ಇಲ್ಲದಿದ್ದರೆ ಏನು ಮಾಡುವುದು ಎಂದು ಕೊರಗುತ್ತಿರುವ ರೈತರಿಗೊಂದು ಸಿಹಿ ಸುದ್ದಿ ತಂದಿದ್ದಾರೆ ಸಂಶೋಧಕ ಶಿವಮೊಗ್ಗ ಜಿಲ್ಲೆ ಸಾಗರದ ವಿಜಯಕುಮಾರ್.
ಇದು ಆಗ್ರೋ ಡ್ರೈಯರ್. ಹಸಿ ಅಡಿಕೆ, ಜಾಯಿಕಾಯಿ ಪತ್ರೆ, ತೆಂಗಿನಕಾಯಿ ಹೋಳು, ಸೂಜಿಮೆಣಸು ಮುಂತಾದ ಮಳೆಗಾಲದ ಬೆಳೆಗಳನ್ನು ಇದರಲ್ಲಿ ಇಟ್ಟು ಒಣಗಿಸಿದರೆ ರೈತರು ನಿರಾಳ.
ಈ ಆಗ್ರೋ ಡ್ರೈಯರ್ಗೆ ನಾಲ್ಕು ಟ್ರೇ ಅಳವಡಿಸಲಾಗಿದೆ. ಒಂದೊಂದು ಟ್ರೇನಲ್ಲಿ ಒಂದೊಂದು ವಸ್ತುವನ್ನು ಇಟ್ಟು ಒಣಗಿಸಬಹುದು. ಅಡಿಕೆ, ಜಾಯಿಕಾಯಿಯಂಥ ಬೆಳೆಯಾದರೆ ಒಂದು ಟ್ರೇನಲ್ಲಿ ೪-೫ ಕೆ.ಜಿ. ಒಮ್ಮೆಗೆ ಒಣಗಿಸುವ ಶಕ್ತಿಯೂ ಇದಕ್ಕಿದೆ.
ಈ ಆಗ್ರೋ ಡ್ರೈಯರ್ ಒಳಗೆ ಕಾಯುವ ಕಾವಲಿ (ಹೀಟಿಂಗ್ ಕಾಯಿಲ್) ಅಳವಡಿಸಿದ್ದಾರೆ. ತಾಪಮಾನ ಕಾಯ್ದುಕೊಳ್ಳಲು ಸ್ವಯಂ ಚಾಲಿತ ಸಿ್ವಚ್ (ಟೆಂಪರೇಚರ್ ಆಟೋ ಕಟ್ಆಫ್ ಸ್ವಿಚ್) ಅಳವಡಿಸಲಾಗಿದೆ. ಬಿಸಿಗಾಳಿ ಆಡಲು ಒಳಗೆ ಫ್ಯಾನ್ ಇದೆ. ಫ್ಯಾನ್ ತಿರುಗುತ್ತ ಸುತ್ತ ಬಿಸಿ ಹವೆಯನ್ನು ಹರಡುತ್ತದೆ. ಒಣಗಿಸುವ ಬೆಳೆಯನ್ನು ಅವಲಂಬಿಸಿ ಎಷ್ಟು ಡಿಗ್ರಿ ಉಷ್ಣಾಂಶ ಬೇಕೋ ಅಷ್ಟಕ್ಕೆ ಇದನ್ನು ಇಟ್ಟುಕೊಳ್ಳಬಹುದು.
ಹೀಗಿದೆ ಮಷಿನ್: ಈ ಆಗ್ರೋ ಡ್ರೈಯರ್ ಮೂರು ಅಡಿ ಎತ್ತರವಿದೆ. ಒಂದೂವರೆ ಅಡಿ ಅಗಲ, ಎರಡೂವರೆ ಅಡಿ ಉದ್ದವಿದೆ. ಸುಮಾರು ೪೦ ಕೆ.ಜಿ. ಭಾರವಿದೆ. ಇದನ್ನು ಇನ್ನು ದೊಡ್ಡದು ಅಥವಾ ಸಣ್ಣದೂ ಮಾಡಬಹುದು ಎನ್ನುತ್ತಾರೆ ವಿಜಯಕುಮಾರ್.
ಯಾವುದೇ ರೀತಿಯ ವಿದ್ಯುತ್ ಅಪಾಯವಿಲ್ಲ. ಇದು ರೈತ ವರ್ಗಕ್ಕೆ ಬಹಳ ಉಪಯೋಗಿ ಎನ್ನುವುದು ಅವರ ಮಾತು. ಅಂದ ಹಾಗೆ ಇದರ ಬೆಲೆ ೮ ಸಾವಿರ ರೂಪಾಯಿ. ಮಾಹಿತಿಗೆ: ೯೪೪೮೭೯೦೧೯೫