ರಾಜ್ಯದಲ್ಲಿ ತಂಬಾಕು ಬೆಳೆಗೆ ಪ್ರಸಿದ್ಧಿ ಪಡೆದ ಊರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ. ಇಲ್ಲಿನ ಬಹುತೇಕ ರೈತರು ಈ ವಾಣಿಜ್ಯ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ಈ ವರ್ಷ ಸರಿಯಾಗಿ ಮಳೆಯಾಗದೇ ತಂಬಾಕಿನ ಫಸಲಿಗೆ ಹೊಡೆತ ಬಿದ್ದಿದೆ.
ಇದ್ದ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವುದು ದೊಡ್ಡ ಸಾಹಸದ ಕೆಲಸ. ಸಾಕಷ್ಟು ಮಳೆ ಬಂದಿದ್ದರೆ ನಿರೀಕ್ಷೆಗೂ ಮೀರಿ ಇಳುವರಿ ಬರುತ್ತಿತ್ತು.
ಇದರ ನಡುವೆ, ತಾವು ಬೆಳೆದ ತಂಬಾಕನ್ನು ಹೊರಗಡೆ ಬಿಸಿಲಿಗೆ ಹಾಕಿ ಒಣಗಿಸುವ ಕಾಲಕ್ಕೆ ಅಕಾಲಿಕ ಮಳೆ ಗಾಳಿಗೆ ಸಿಕ್ಕು ಬಣ್ಣ, ಗುಣಮಟ್ಟ ಕಳೆದುಕೊಳ್ಳುವ ಭಯ ರೈತರಿಗೆ ಇದ್ದೇ ಇದೆ. ಇದನ್ನು ತಪ್ಪಿಸಲು ತಾಲ್ಲೂಕಿನ ಹೊಸಖೋತವಾಡಿಯ ರೈತ ಮಾರುತಿ ಖೋತ ಸರಳ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.
ಕೊಯ್ಲು ಮಾಡಿದ ತಂಬಾಕನ್ನು ಮನೆಯ ಒಳಗಡೆಯ ಮಾಳಿಗೆಗೆ ನೇತು ಹಾಕಿದ್ದಾರೆ. ಇದರಿಂದ ತಂಬಾಕಿಗೆ ಒಳ್ಳೆಯ ಬಣ್ಣ ಬರುವುದರೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡ ಅವರಿಗೆ ಸಿಕ್ಕಿದೆ. ಇದರಲ್ಲಿ ಖರ್ಚೂ ಕಡಿಮೆ, ಶ್ರಮವೂ ಕಡಿಮೆ ಎನ್ನುವುದು ಅವರ ಅನುಭವ.