ನೆರೆ ಮತ್ತು ಬರ ಇವೆರಡೂ ರೈತರನ್ನು ಬೆಂಬಿಡದೇ ಕಾಡುತ್ತಿರುವ ಬೃಹದಾಕಾರವಾಗಿರುವ ಸಮಸ್ಯೆ. ನೈಸರ್ಗಿಕ ವಿಕೋಪದ ಮುಂದೆ ರೈತರದ್ದು ಅರಣ್ಯರೋದನ. ಆದರೆ ಇಂಥ ವಿಪತ್ತಿಗೆ ಸಡ್ಡು ಹೊಡೆದು ಅದರಲ್ಲಿಯೇ ಲಾಭ ಕಾಣುವವರೇ ನಿಜವಾದ ಶ್ರಮಜೀವಿಗಳು. ಅಂಥ ಒಂದು ಉದಾಹರಣೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಸುಭಾಷ ಬಸಪ್ಪಾ ವಾಲಿಮರದ. ಬರದ ನಾಡೆಂದೇ ಹಣೆಪಟ್ಟಿ ಹೊತ್ತುಕೊಂಡಿರುವ ಈ ಗ್ರಾಮದಲ್ಲಿ ಸಿಗುವ ಅತ್ಯಲ್ಪ ನೀರಿನಲ್ಲಿಯೇ ಇವರು ‘ಬಂಗಾರದ ಬೆಳೆ’ ಬೆಳೆದಿದ್ದಾರೆ. ಇವರ ಮೂರು ಎಕರೆ ಜಮೀನಿನಲ್ಲಿ 30 ಟನ್ ಚೆಂಡು ಹೂವು ಬೆಳೆಯನ್ನು ಹುಲುಸಾಗಿ ಬೆಳೆದು ನಿಂತಿವೆ.
ಕೈಹಿಡಿದ ಹನಿ ನೀರಾವರಿ
ಹನಿ ನೀರಾವರಿ ಪದ್ಧತಿಯಿಂದಾಗಿ ಇವರು ಇಷ್ಟೆಲ್ಲಾ ಬೆಳೆ ಬೆಳೆಯಲು ಸಾಧ್ಯವಾಗಿದೆ. ಕಳೆದ ವರ್ಷ ಎರಡು ಎಕರೆಯಲ್ಲಿ 16 ಟನ್ ಚೆಂಡು ಹೂವನ್ನು ಬೆಳೆದು ಲಾಭ ಗಳಿಸಿದ್ದಾರೆ. ಈ ವರ್ಷ ಪ್ರತಿ ಎಕರೆಗೆ 10 ಟನ್ ಬೆಳೆ ಗಳಿಸುವ ನಿರೀಕ್ಷೆ ಹೊಂದಿದ್ದಾರೆ.
‘ಪ್ರಸ್ತುತ ಮಾರುಕಟ್ಟೆ ದರದಲ್ಲಿ ಟನ್ ಒಂದಕ್ಕೆ 7–8 ಸಾವಿರ ದರವಿದೆ. ಆದರೆ ನಾವು ಕಂಪೆನಿಯೊಂದರ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಕಾರಣ ಪ್ರತಿ ಟನ್ನಿಗೆ 9ಸಾವಿರ ಸಿಗುತ್ತಿದೆ. ಇದರಿಂದ ಮಾರುಕಟ್ಟೆ ಸಮಸ್ಯೆ ನನ್ನನ್ನು ಕಾಡಿಲ್ಲ. ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದ್ದು ಹೂವು ಬಿಡಿಸುವ ಕಾರ್ಮಿಕರ ಕೂಲಿ ಇತ್ಯಾದಿ ಖರ್ಚು ಹೋಗಿ ಸುಮಾರು 2.20ಲಕ್ಷ ಲಾಭ ಗಳಿಸಿದ್ದೇನೆ’ ಎನ್ನುತ್ತಾರೆ ಸುಭಾಷ್. ಕೀಟಬಾಧೆ ಬಾರದಿರಲು ಇವರು ಸಾವಯವದ ಮೊರೆ ಹೋಗಿದ್ದಾರೆ. ಗೋ ಮೂತ್ರ, ಬೆಲ್ಲದ ರಸಾಯನ, ನಿಂಬೆರಸ ಇತ್ಯಾದಿ ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಪಡಣೆ ಮಾಡುತ್ತಾರೆ.
‘ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ನಂಬಿ ಅನೇಕ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಅದರ ಬದಲಾಗಿ ಚೆಂಡು ಹೂವಿನಂತಹ ಲಾಭದಾಯಕ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಪಡೆಯುವ ಮೂಲಕ ಆರ್ಥಿಕ ಸಾವಲಂಬನೆ ಸಾಧಿಸುವತ್ತ ರೈತರು ಮುಂದೆ ಬರಬೇಕಾಗಿದೆ’ ಎನ್ನುವುದು ಅವರ ಮಾತು.
‘ಅಲ್ಪಾವಧಿಯಲ್ಲಿ ಬೆಳೆಯುತ್ತಿರುವ ಚೆಂಡು ಹೂವು ರೈತರಿಗೆ ಲಾಭ ನೀಡುತ್ತಿದೆ. ಕಬ್ಬು, ತಂಬಾಕು ಮುಂತಾದ ವಾಣಿಜ್ಯ ಬೆಳೆಗಳಿಗೆ ಪರ್ಯಾಯವಾಗಿ ರೈತರು ಲಾಭದಾಯಕವಾದ ಚೆಂಡು ಹೂ, ಅರಿಶಿಣ, ಮೆಣಸು ಮುಂತಾದ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಬೇಕು. ಇವು ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವುದರೊಂದಿಗೆ ಭೂಮಿಯ ಫಲವತತ್ತೆಯನ್ನು ಕಾಪಾಡಿಕೊಳ್ಳುತ್ತದೆ’ ಎನ್ನುವುದು ಅವರ ಅನುಭವದ ನುಡಿ.
ಸಂಪರ್ಕ ಸಂಖ್ಯೆ: 9916295800.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.