ಕವಿ, ಯುದ್ಧದ ಕರಾಳ ದೃಶ್ಯಗಳನ್ನು ನೋಡಿದನು ಮಡಿದವರನ್ನು, ಬಲಿಯಾಗುತ್ತಿರುವರನ್ನು ಅಮಾಯಕರನ್ನು ಕಂಡು ಮರುಗಿದನು
ಬದುಕುಳಿದವರ ಯಾತನೆ, ಯಾಚನೆ, ನಿಟ್ಟುಸಿರು, ನೋವು ಎಲ್ಲವನ್ನೂ ಅನುಭವಿಸುವವನಂತೆ ತಾನೆ ಖುದ್ದು ನರಳಿದನು
ಲೋಕ ಕಾಣಲಾಗದ್ದನ್ನು ಮತ್ತು ಕೇಳಲಾಗದ್ದನ್ನೂ ತನ್ನ ಅರಿವಿನ ಒಳಗಣ್ಣು ತೆರೆದು ಓದುಗರ ಮನ ಕಲಕುವಂತೆ ಹೃದಯ ಹಿಂಡುವಂತೆ ಯುದ್ಧದ ಭೀಕರತೆಯನ್ನು ಅದರ ರೌದ್ರತೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಕವಿ ಕವಿತೆ ಬರೆದನು
ರಸ್ತೆಗಳ ಮೇಲೆ, ಮನೆಗಳ ಒಳಗೆ ಮಕ್ಕಳಾಡುವ ಬಯಲಲ್ಲಿ ವೃದ್ಧರು ಓಡಾಡುವ ಉದ್ಯಾನಗಳಲ್ಲಿ ಶಾಲೆ, ಆಲಯ ಎಲ್ಲೆಡೆಯಲ್ಲಿ ರಕ್ತದ ಹೂಗಳು ಅರಳಿದ್ದನ್ನು ನೋವಿನ ದುಂಬಿಗಳ ಝೇಂಕರಿಸಿದ್ದನ್ನು ದುಃಖದ ಮೋಡಗಳು ಆವರಿಸಿದ್ದನ್ನು ಭಯದ ಕತ್ತಲು ಕವಿದಿದ್ದನ್ನು ಬರೆದನು ಎಲ್ಲವನ್ನು
ಸತ್ತವರ, ಗಾಯಗೊಂಡವರ ಬದುಕುಳಿದವರ ಇರುವ ವಾಸ್ತವವನ್ನು ಭರವಸೆಯಿಲ್ಲದ ನಾಳೆಗಳ ಮಕ್ಕಳ, ದೇಶದ ಭವಿಷ್ಯವನ್ನು
ಕಳೆದುಕೊಳ್ಳುತ್ತಿರುವ ಎಲ್ಲರನ್ನು ಕೊಲ್ಲುತ್ತಿರುವ ಅಸಹಾಯಕತೆಯನ್ನು ಹತ್ತಿಕ್ಕಲಾರದ ವ್ಯವಸ್ಥೆಯ ಕ್ರೂರತೆಯನ್ನು ಮನ ಮುಟ್ಟುವಂತೆ ಹೃದಗಳ ತಟ್ಟುವಂತೆ ಕವಿ ಕವಿತೆ ಕಟ್ಟಿದನು