ನವದೆಹಲಿ (ಪಿಟಿಐ): ಐಎಎಸ್ ಹುದ್ದೆ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಉದ್ಯೋಗಗಳ ನೇಮಕಾತಿ ಮತ್ತು ಬಡ್ತಿಯಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿರುವ ‘ಅಂಗವಿಕಲರ (ಸಮಾನ ಅವಕಾಶ, ಸಂಪೂರ್ಣ ಪಾಲ್ಗೊಳ್ಳುವಿಕೆ ಮತ್ತು ಹಕ್ಕುಗಳ ರಕ್ಷಣೆ) ಕಾಯ್ದೆ’ ಜಾರಿಯಾಗಿ 19 ವರ್ಷಗಳಾದರೂ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿತು.
ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ‘ಎ ಮತ್ತು ಬಿ ಶ್ರೇಣಿ ಹುದ್ದೆಗಳ ಅಧಿಕಾರಿಗಳಿಗೆ ಬಡ್ತಿ ನೀಡುವುದು ನೇಮಕಾತಿಯಾಗುವುದಿಲ್ಲ. ಆದ್ದರಿಂದ ಈ ಹುದ್ದೆಗಳ ಬಡ್ತಿ ವಿಚಾರದಲ್ಲಿ ಮೀಸಲಾತಿ ಅನ್ವಯವಾಗದು’ ಎಂದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೇಮಕಾತಿಗೆ ವಿಶಾಲ ಅರ್ಥ ಇದೆ. ಆದರೆ, ಸರ್ಕಾರ ಇದನ್ನು ಸಂಕುಚಿತವಾಗಿ ಅರ್ಥೈಸುತ್ತಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಸಂಸತ್ತಿನಲ್ಲಿ ಅಂಗೀಕಾರವಾದ ಕಾಯ್ದೆಯ ಆಶಯಕ್ಕೆ ಸರ್ಕಾರ ತಡೆವೊಡ್ಡುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.
‘ಸುಮಾರು ಎರಡು ದಶಕಗಳಿಂದ ಈ ಕಾಯ್ದೆ ಸಮರ್ಪಕವಾಗಿ ಜಾರಿಯಾಗದ ಕಾರಣ ಕಾಯ್ದೆ ಯಾರಿಗಾಗಿ ರಚಿಸಲಾಗಿದೆಯೋ ಅಂತಹವರಿಗೆ ಅದರ ಲಾಭ ದೊರಕಿಲ್ಲ’ ಎಂದ ನ್ಯಾಯಪೀಠ, ಸರ್ಕಾರದ ಅರ್ಜಿ ವಜಾ ಮಾಡಿತು.
ಐಎಎಸ್ ಹುದ್ದೆಗಳ ನೇಮಕಾತಿ ಮತ್ತು ಬಡ್ತಿಯಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಲೋಕಸೇವಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.