ನವದೆಹಲಿ (ಪಿಟಿಐ): ನಿವೃತ್ತಿಯ ನಂತರ ನ್ಯಾಯಮೂರ್ತಿಗಳು ಸರ್ಕಾರಿ ಹುದ್ದೆಗಳನ್ನು ವಹಿಸಿಕೊಳ್ಳುವುದರ ನಡುವೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿದ್ದ ಪಿ. ಸದಾಶಿವಂ ಅವರು ನಿವೃತ್ತಿಯಾದ ನಂತರ ರಾಜ್ಯಪಾಲರ ಹುದ್ದೆಯನ್ನು ವಹಿಸಿಕೊಂಡ ನಂತರ ಈ ಬಗ್ಗೆ ವ್ಯಾಪಕವಾಗಿ ಚರ್ಚೆ ಆರಂಭವಾಗಿತ್ತು.
ನಿವೃತ್ತ ನ್ಯಾಯಮೂರ್ತಿಗಳು ಸರ್ಕಾರದ ಹುದ್ದೆಯನ್ನು ವಹಿಸಿಕೊಳ್ಳಲು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು ನೇತೃತ್ವದ ಪೀಠ ವಿಚಾರಣೆ ನಡೆಸಿತು.
ನಿವೃತ್ತರಾದ ತಕ್ಷಣವೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ನ್ಯಾಯಮೂರ್ತಿಗಳನ್ನು ಬೇರೆ ಹುದ್ದೆಗಳಿಗೆ ಸರ್ಕಾರ ನೇಮಕ ಮಾಡದಂತೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ವಿನಂತಿಸಲಾಗಿತ್ತು. ದತ್ತು ಅವರಿಗೆ ಮೊದಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್. ಎಂ. ಲೋಧಾ ಅವರು, ನ್ಯಾಯಮೂರ್ತಿಗಳು ನಿವೃತ್ತಿಯಾದ ನಂತರ ಎರಡು ವರ್ಷ ಬೇರೆ ಯಾವುದೇ ಸರ್ಕಾರಿ ಹುದ್ದೆ ವಹಿಸಿಕೊಳ್ಳುವುದಕ್ಕೆ ಅವಕಾಶ ಇರಬಾರದು ಎಂದು ತಮ್ಮ ಕೊನೆಯ ಕೆಲಸ ದಿನದಂದು ಹೇಳಿದ್ದರು. ಎರಡು ವರ್ಷ ಸರ್ಕಾರದ ಯಾವುದೇ ಹುದ್ದೆವಹಿಸಿಕೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು.
ನ್ಯಾಯಾಂಗದ ಬದ್ಧತೆಯನ್ನು ರಕ್ಷಿಸುವುದಕ್ಕಾಗಿ ನ್ಯಾಯಮೂರ್ತಿಗಳು ನಿವೃತ್ತರಾದ ನಂತರ ಸರ್ಕಾರಿ ಹುದ್ದೆ ವಹಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಅವಧಿ ಅಂತರ ಅಗತ್ಯ ಎಂದು ಅರ್ಜಿದಾರ ಮೊಹಮ್ಮದ್ ಆಲಿ ಆಗ್ರಹಿಸಿದ್ದರು.
ಸಂವಿಧಾನದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಯಾಕೆಂದರೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾದಕೂಡಲೇ ಸರ್ಕಾರ ನೀಡುವ ಹುದ್ದೆಯನ್ನು ಸ್ವೀಕರಿಸಬಹುದು ಎಂದು ಸಂವಿಧಾನ ರಚನೆಕಾರರು ನಿರೀಕ್ಷಿಸಿರಲಿಲ್ಲ ಎಂದು ಅವರು ವಾದಿಸಿದರು.