ಶಿವಮೊಗ್ಗ: ‘ಅಕಾಡೆಮಿಗಳ ಕಾರ್ಯಕ್ರಮಗಳು ಇಂದಿನ ಅಗತ್ಯಗಳ ಹಾಗೂ ಹೊಸ ತಲೆಮಾರಿನ ತುಡಿತಗಳಿಗೆ ಅನುಗುಣವಾಗಿ ವಿಕೇಂದ್ರೀಕರಣಗೊಳ್ಳಬೇಕು’ ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ. ನಾರಾಯಣ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ
ಅಕಾಡೆಮಿಯ ‘ಸುವರ್ಣ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಹಣಕಾಸಿನ ಹೊಣೆಗಾರಿಕೆ ಜತೆಗೆ ಸಾಮಾಜಿಕ–ಸಾಂಸ್ಕೃತಿಕ ಹೊಣೆಗಾರಿಕೆ ಕೂಡ ಅಕಾಡೆಮಿಗಳಿಗೆ ಇರಬೇಕು. ಸಮಾಜದಲ್ಲಿ ಅಕಾಡೆಮಿಗಳ ಬಗ್ಗೆ ಹಗುರ ಭಾವನೆ ಇದೆ; ‘ಬಿಳಿ ಆನೆ’, ‘ಗಂಜಿ ಕೇಂದ್ರ’ ಎಂಬ ಟೀಕಾಸ್ತ್ರಗಳ ನಡುವೆಯೂ ಅಕಾಡೆಮಿಗಳು ಸಾಂಸ್ಕೃತಿಕ ಹೊಣೆಗಾರಿಕೆ ನಿರ್ವಹಿಸುವುದರ ಕುರಿತು ಸುದೀರ್ಘ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಅಕಾಡೆಮಿ ಗೌರವ ಸ್ವೀಕರಿಸಿದ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿ, ಅಕಾಡೆಮಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಸಾಂಸ್ಕೃತಿಕ ಲೋಕದ ಸಾಹಿತಿ, ಕಲಾವಿದರಿಂದ ಕೂಡಿದ ಒಂದು ಸಂಸ್ಥೆಯಾಗಿ ಅಕಾಡೆಮಿಗಳು ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.