ಬೀಜಿಂಗ್ (ಪಿಟಿಐ): ಟಿಬೆಟ್ನಲ್ಲಿ ಜಲವಿದ್ಯುತ್ ಯೋಜನೆಗಾಗಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ನಿರ್ಮಿಸುವ ಸರಣಿ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಚೀನಾ, ಅಣೆಕಟ್ಟೆ ನಿರ್ಮಾಣದ ವೇಳೆ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವುದಾಗಿ ಹೇಳಿದೆ.
ಅಣೆಕಟ್ಟಿನ ಕೆಳಭಾಗದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶಗಳ ಸುರಕ್ಷತೆ ಕುರಿತೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ಅದು ತಿಳಿಸಿದೆ.
‘ಗಡಿಯಾಚೆಗಿನ ನದಿ ನೀರಿನ ಬಳಕೆಯ ಯೋಜನೆಯಲ್ಲಿ ಚೀನಾ ಜವಾಬ್ದಾರಿಯುತ ಗುಣವನ್ನು ಅಳವಡಿಸಿಕೊಂಡಿದೆ. ಇದು ಪರಸ್ಪರ ಕೈಜೋಡಿಸುವುದರೊಂದಿಗೆ ಮತ್ತು ಸುರಕ್ಷತೆಯೊಂದಿಗೆ ಸಾಗಲಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹು ಚುನಿಂಗ್ ಸೋಮವಾರ ತಿಳಿಸಿದರು.
‘ಜಲವಿದ್ಯುತ್ ಯೋಜನೆಗಳು ಹರಿವಿನ ಭಾಗದಲ್ಲಿರುವ ಪ್ರದೇಶಗಳ ಪರಿಸರ ವ್ಯವಸ್ಥೆ ಮತ್ತು ಪ್ರವಾಹ ನಿಯಂತ್ರಣಗಳಿಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ. ಅವರೊಂದಿಗೆ ಸಮೀಪದ ಸಂಪರ್ಕ ಮತ್ತು ಸಹಕಾರ ಹೊಂದಿದ್ದೇವೆ’ ಎಂದರು.
‘ಅಣೆಕಟ್ಟೆ ಕುರಿತ ಮಾಹಿತಿಯನ್ನು ಒದಗಿಸಿರುವುದಕ್ಕಾಗಿ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗೆ ನೆರವು ನೀಡುವ ಚೀನಾದ ಭರವಸೆಗೆ ಭಾರತ ಕೃತಜ್ಞತೆ ಸಲ್ಲಿಸಿದೆ’ ಎಂದು ಹೇಳಿದರು.
2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾಡಿಕೊಂಡ ಗಡಿಯಾಚೆಗಿನ ನದಿ ನೀರಿನ ಕುರಿತ ಒಪ್ಪಂದವನ್ನು ಪ್ರಸ್ತಾಪಿಸಿದ ಚುನಿಂಗ್, ಈ ಒಪ್ಪಂದವನ್ನು ಭಾರತದೊಂದಿಗಿನ ಸಹಕಾರವನ್ನು ವೃದ್ಧಿಸಿಕೊಳ್ಳಲು ಬಳಸುವುದಾಗಿ ತಿಳಿಸಿದರು.
ವಿದ್ಯುತ್ ಉತ್ಪಾದನೆ ಪ್ರಾರಂಭ: ಬ್ರಹ್ಮಪುತ್ರ ನದಿಯ ಜಲವಿದ್ಯುತ್ ಯೋಜನೆಯಲ್ಲಿ ಮೊದಲ ಹಂತದ ವಿದ್ಯುತ್ ಉತ್ಪಾದನೆಯನ್ನು ಚೀನಾ ಪ್ರಾರಂಭಿಸಿದೆ. ಜಂಗ್ಮು ಜಲವಿದ್ಯುತ್ ಸ್ಥಾವರದಲ್ಲಿ ₨160 ಕೋಟಿ ವೆಚ್ಚದ ಸುಮಾರು 5 ಲಕ್ಷ ಕಿಲೊವಾಟ್ ಉತ್ಪಾದನಾ ಸಾಮರ್ಥ್ಯದ ಈ ಘಟಕ ಭಾನುವಾರ ಕಾರ್ಯಾರಂಭ ಮಾಡಿದೆ.