ಗದಗ: ರಾಜ್ಯದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಗೌರವ ಇಲ್ಲದ ಮನೆಗಳಾಗಲಿ, ಸಮಾಜವಾಗಲಿ ಎಷ್ಟೇ ಪ್ರಗತಿ ಸಾಧಿಸಿದರೂ ಅದು ನಿಜವಾದ ಪ್ರಗತಿಯಲ್ಲ, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಅಗತ್ಯವಾದ ಕಟ್ಟುನಿಟ್ಟಿನ ಕ್ರಮಕ್ಕೆ -ಸರ್ಕಾರ ತ್ವರಿತವಾಗಿ ಮುಂದಾಗಬೇಕು.
ಮುಂದುವರಿದ ನಗರಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನೋಡಿದರೆ ಮಾನವ ಎಷ್ಟು ಕುಬ್ಜನಾಗಿದ್ದಾನೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷ್ಷೆಯನ್ನು ತ್ವರಿತವಾಗಿ ವಿಧಿಸುವ ಕುರಿತು ಸೂಕ್ತ ಕಾನೂನು ಮಾರ್ಪಾಡು ಅನಿವಾರ್ಯವಾಗಿದೆ. ಸ್ವಾತಂತ್ರದ ಹೆಸರಲ್ಲಿ ಸ್ವೇಚ್ಛಾಚಾರ ಮೆರೆಯುವುದು ಸಲ್ಲದು. ನೈತಿಕ ಮೌಲ್ಯಗಳು ಮಾನವ ಜೀವನದ ಪ್ರಗತಿಗೆ ಸೋಪಾನವಾಗಿವೆ ಎಂದು ನುಡಿದರು.
ಮಹಿಳಾ ದೌರ್ಜನ್ಯ ಮತ್ತು ಸಂರಕ್ಷಣಾ ಕ್ರಮ ಕುರಿತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ ಕೆ.ಎಸ್. ಅಕ್ಕಮಹಾದೇವಿ ಮಾತನಾಡಿ, ಮಹಿಳೆಯರು ದೌರ್ಜನ್ಯ ವಿರುದ್ಧ ಹೋರಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಶೋಷಣೆ ನಡೆದಾಗ ಪೊಲೀಸ್ ಠಾಣೆಗೆ ಬದಲಾಗಿ ಇಲಾಖೆ ಅಭಿವೃದ್ಧಿ ಅಧಿಕಾರಿಗಳಿಗೆ ಕೂಡ ದೂರು ನೀಡಬಹುದಾಗಿದೆ ಎಂದು ಸಲಹೆ ನೀಡಿದರು.
ಬೆಟಗೇರಿಯ ದೊಡ್ಡಾಟ ಕಲಾವಿದರಾದ ಅಶೋಕ ಸುತಾರ, ವಿರೇಶ ಬಡಿಗೇರ ಅಲ್ಲದೆ ಅರುಣೋದಯ ಕಲಾ ಬಳಗದ ಶಂಕ್ರಣ್ಣ ಸಂಕಣ್ಣವರ ಅವರು ಶರಣರ ವಚನಗಳನ್ನು ದೊಡ್ಡಾಟದ ಪದಗಳನ್ನು ಹಾಡಿದರು.
ಶ್ರಾವಣ ಮಾಸ ನಿಮಿತ್ಯ ಪ್ರತಿನಿತ್ಯ ಸಂಜೆ ನಡೆಯುವ ಡಾ.ಲತಾ ರಾಜಶೇಖರ ರಚಿಸಿದ ಬಸವ ಮಹಾದರ್ಶನ ಪ್ರವಚನ ಮಾಲಿಕೆಯ ಮೊದಲ ಭಾಗವನ್ನು ಎಂ.ಎ..ಹಂಚನಾಳ ಸಾದರ ಪಡಿಸಿದರು.
ಭಾರತಿ ಬಸನಗೌಡ ಪಾಟೀಲ ಧರ್ಮಗ್ರಂಥ ಪಠಣ ಮಾಡಿದರು, ತೇಜಸ್ವಿನಿ ರಾಜಶೇಖರ ತೋಟದ ಧರ್ಮ ಚಿಂತನೆ ನಡೆಸಿದರು.
ಭಕ್ತಿಸೇವೆ ವಹಿಸಿದ್ದ ವಿರೂಪಾಕ್ಷಪ್ಪ ಗದಗ,ರವಿಂದ್ರ ಗದಗ ಅವರನ್ನು ಸನ್ಮಾನಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಎಸ್.ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಎಸ್.ಕಳಸಾಪೂರಶೆಟ್ರ, ರತ್ನಕ್ಕ ಪಾಟೀಲ, ಕಾರ್ಯದರ್ಶಿ ಕೆ.ಪಿ.ಗುಳಗೌಡ್ರ, ಸಹ ಕಾರ್ಯದರ್ಶಿ ವೀರಣ್ಣ ಜ್ಯೋತಿ, ಖಜಾಂಚಿ ಚಂದ್ರಶೇಖರ ಅರಳಿ ಹಾಜರಿದ್ದರು. ಶಿವಾನುಭವ ಸಮಿತಿ ಅಧ್ಯಕ್ಷ ಪ್ರೊ.ಎಸ್.ಎನ್.ಆದಿ ಸ್ವಾಗತಿಸಿದರು. ಎಸ್.ಎಂ.ವಾಲಿ ಗುರು ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.