ಬೆಂಗಳೂರು: ಸಾಮಾಜಿಕ ಜಾಲತಾಣ ‘ಫೇಸ್ಬುಕ್’ ಮೂಲಕ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ಅತ್ಯಾಚಾರದ ಬೆದರಿಕೆ ಹಾಕಿದ ಆರೋಪದ ಮೇಲೆ ವಿ.ಆರ್.ಭಟ್ ಎಂಬುವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತೆಯೊಬ್ಬರು ‘ವೈಜ್ಞಾನಿಕ ಸಂಶೋಧನೆ, ಚಿಂತನೆ–ಶ್ರಮ ಸಂಸ್ಕೃತಿ’ ವಿಷಯ ಕುರಿತು ಫೇಸ್ಬುಕ್ ಖಾತೆಯಲ್ಲಿ ಭಾನುವಾರ ಬರೆದಿದ್ದ ಬರಹಕ್ಕೆ ಭಟ್ ಅವರು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನೀಡಿದ ದೂರು ಆಧರಿಸಿ ನಿಂದನೆ, ಅಪರಾಧ ಸಂಚು ಮತ್ತು ಮಾಹಿತಿ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಾನಮತ್ತರಿಂದ ಸ್ನೇಹಿತನ ಮೇಲೆ ಹಲ್ಲೆ
ಪಾನಮತ್ತ ಯುವಕರು ಸ್ನೇಹಿತನಿಗೆ ಬಿಯರ್ ಬಾಟಲಿಗಳಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಭಾರತಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾಗಿರುವ ಅಗಸ್ಟಿನ್ (28) ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗಸ್ಟಿನ್ ಮತ್ತು ಆತನ ಸ್ನೇಹಿತರಾದ ನವೀನ್, ಪಾರ್ಥಿಬನ್ ಮತ್ತಿತರರು ಭಾರತಿನಗರದ ಮೆಮೊರಿಯಲ್ ಉದ್ಯಾನದಲ್ಲಿ ರಾತ್ರಿ ಮದ್ಯಪಾನ ಮಾಡಿದ್ದರು. ನಂತರ ಅವರ ನಡುವೆ ಜಗಳವಾಗಿ ನವೀನ್ ಹಾಗೂ ಪಾರ್ಥಿಬನ್, ಆತನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಿನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.