ದೇವನಹಳ್ಳಿ: ಹಳ್ಳಿಯಲ್ಲಿನ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಕರೆದಿರುವ ಗ್ರಾಮ ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ತಾಲ್ಲೂಕಿನ ರಾಮನಾಥಪುರದಲ್ಲಿ ನಡೆಯಿತು.
ಕೊಯಿರಾ ಗ್ರಾಮ ಪಂಚಾಯಿತಿ ವತಿಯಿಂದ ರಾಮನಾಥಪುರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಪ್ರಸನ್ನ ಕುಮಾರ್ ಅರ್ಹರಿಗೆ ನಿವೇಶನ, ಪಡಿತರ ಕಾರ್ಡ್ ಸಮಸ್ಯೆ, ವಿದ್ಯುತ್ ಕೊರತೆ, ಕುಡಿಯುವ ನೀರು, ಪ್ರಮುಖವಾಗಿ ರೈತರು ಕೃಷಿ ಚಟುವಟಿಕಗಳ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲವೆಂದರೆ ಗ್ರಾಮ ಸಭೆ ಯಾಕೆ ನಡೆಸಬೇಕು ಎಂದು ಪ್ರಶ್ನಿಸಿದರು.
ಶೈಕ್ಷಣಿಕ ಪ್ರಗತಿ, ಆರೋಗ್ಯ ಕೇಂದ್ರಗಳಲ್ಲಿನ ಸಮಸ್ಯೆ, ಪಶು ವೈದ್ಯಕೀಯ ಸೇವೆ, ಅಂಗನವಾಡಿ ಕೇಂದ್ರಗಳ ನಿರ್ವಹಣೆ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಬರುತ್ತಿರುವ ಅನುದಾನ ಬಗ್ಗೆ ಮಾಹಿತಿ ನೀಡಬೇಕು ಅಧಿಕಾರಿಗಳು ಸಭೆಗೆ ಬರದಿದ್ದರೆ ಯಾರನ್ನು ಕೇಳಬೇಕು ಪ್ರತಿ ಬಾರಿ ಗ್ರಾಮ ಸಭೆ ನಡೆದರೂ ಇದೆ ಗೋಳು ಎಂದು ಅಧಿಕಾರಿಗಳು ವಿರುದ್ಧ ಹರಿಹಾಯ್ದರು.
ಗ್ರಾ.ಪಂ. ಅಧ್ಯಕ್ಷ ಕೆ.ಎಸ್. ಶ್ರೀನಿವಾಸ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಲಾಟರಿ ಮೂಲಕ 42 ಅರ್ಹರನ್ನು ಗುರುತಿಸಲಾಗಿದೆ. ಶೇಕಡ 100ರಷ್ಟು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬೇರೆ ಪಂಚಾಯಿತಿಯಂತೆ ಈ ಪಂಚಾಯಿತಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಹೆಚ್ಚು ಇಲ್ಲ. ಕೇವಲ ಕಂದಾಯ ವಸೂಲಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಗ್ರಾ. ಪಂ. ವ್ಯಾಪ್ತಿಯಲ್ಲಿನ ಸಾರ್ವಜನಿಕರು ಸಕಾಲದಲ್ಲಿ ಕಂದಾಯ ಪಾವತಿಸಿ ಸಹಕರಿಸಬೇಕು ಎಂದರು. ಉಪಾಧ್ಯಕ್ಷೆ ರಾಧಮ್ಮ ಇದ್ದರು.