ದೇಶದ ಅಭಿವೃದ್ಧಿ ಸಾಧಿಸಬೇಕಾದರೆ ಪ್ರಧಾನಿಯೊಬ್ಬರೇ ಸಾಕು, ಕೇಂದ್ರ ಸರ್ಕಾರವೇ ಅಭಿವೃದ್ಧಿಯ ಹರಿಕಾರ ಎಂಬ ಮೇಲ್ಮಟ್ಟದ ಹೇಳಿಕೆಗಳು, ಅಭಿಪ್ರಾಯಗಳೇ ಒಟ್ಟು ಸಾರ್ವಜನಿಕ ಅಭಿಪ್ರಾಯದಂತೆ ಮಂಡಿತವಾಗುತ್ತಿವೆ.
ವಾಸ್ತವವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿಸಲು ಮುಖ್ಯಮಂತ್ರಿಗಳ (ರಾಜ್ಯ ಶಾಸನಸಭೆಯ ನಾಯಕ ಆಗಿರುವುದರಿಂದ ಮುಖ್ಯಮಂತ್ರಿ ಎಂದರೆ ಒಟ್ಟು ಶಾಸನಸಭೆ ಎಂಬ ಅರ್ಥ ಬರುತ್ತದೆ) ಪಾತ್ರ ಬಹಳ ಮಹತ್ವದ್ದಾಗಿದೆ ಎಂಬ ಅಂಶವನ್ನು ಗುರುತಿಸಿದ ‘ಪ್ರಗತಿಗೆ ಮುಖ್ಯಮಂತ್ರಿಗಳ ಪಾತ್ರವೂ ಮುಖ್ಯ’ ಎಂಬ ಲೇಖನ (ಪ್ರ.ವಾ., ಗುಹಾಂಕಣ, ಸೆ. 19) ಮಹತ್ವಪೂರ್ಣ ಚರ್ಚೆಯೊಂದನ್ನು ಮುಂಚೂಣಿಗೆ ತಂದಿದೆ.
ಇಲ್ಲಿ ಚರ್ಚೆ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಬದಲಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಂಬಂತೆ ನಿರ್ವಚಿಸಿದ್ದರೆ ಇನ್ನೂ ಉತ್ತಮ-ವಾದ ಒಳನೋಟಗಳು ಸಿಗುತ್ತಿದ್ದವು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆಯ ಚರ್ಚೆ ಇಂದು ನಿನ್ನೆಯದಲ್ಲ.
ಇದಕ್ಕೆ ಬಹಳ ದೊಡ್ಡ ಇತಿಹಾಸವೇ ಇದೆ. ಈ ಕುರಿತಂತೆ ೧9೮೩ರಲ್ಲಿ ರಚಿತವಾದ ಸರ್ಕಾರಿಯಾ ಆಯೋಗ ‘ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರದ ವಿಕೇಂದ್ರೀಕರಣ ಮತ್ತು ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾದವುಗಳು’ ಎಂಬ ಅಂಶವನ್ನು ಪ್ರಸ್ತಾಪಿಸುತ್ತಾ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ರಾಜ್ಯಗಳಿಗೆ ಹಂಚುವ ಕೆಲಸ ಮಾಡಬೇಕು ಎಂಬ ಮಹತ್ವಪೂರ್ಣ ಅಂಶವನ್ನು ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಇತ್ಯಾದಿ ಮಹತ್ವಪೂರ್ಣ ವಿಷಯಗಳ ಕುರಿತು ನೀತಿ ನಿರೂಪಣೆ ಮಾಡುವ ಮುಖ್ಯಮಂತ್ರಿ, ರಾಜ್ಯಗಳ ಅಭಿವೃದ್ದಿಯಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಾರೆ. ಇದರ ಅರ್ಥ, ವಾಸ್ತವವಾಗಿ ಅಭಿವೃದ್ಧಿಯನ್ನು ಸಾಧಿಸುವುದು ರಾಜ್ಯ ಶಾಸನಸಭೆಯೇ ಆಗಿದೆ. ಕೇಂದ್ರ ಅದಕ್ಕೆ ಬೇಕಾಗುವ ನೆರವನ್ನು ಒದಗಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಕೊಂಡಿಯಂತೆ ಕೆಲಸ ಮಾಡಬೇಕಿದೆ. ಆದರೆ ಈಗ ನಡೆಯುತ್ತಿರುವ ಚರ್ಚೆಗಳು, ಕೇಂದ್ರವೇ ನೇರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತದೆ ಎಂಬರ್ಥದಲ್ಲಿ ನಿರ್ವಹಣೆಯಾಗುತ್ತಿವೆ.
ಸಾಂವಿಧಾನಿಕವಾಗಿ ನೋಡಿದರೂ ಈ ನಿಲುವನ್ನು ಒಪ್ಪಲು ಸಾಧ್ಯವಿಲ್ಲ. ಈಗ ಮುಂಚೂಣಿಗೆ ಬರುತ್ತಿರುವ ಈ ವಾದವನ್ನು ನಾವು ಸರಿಯಾಗಿ ಅರ್ಥೈಸದಿದ್ದರೆ ಮುಂದೆ ಇದು ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳ ಮಹತ್ವವನ್ನೇ ಕಡೆಗಣಿಸುವ, ಆ ಮೂಲಕ ಕೇಂದ್ರದ ದೊಡ್ಡಣ್ಣನ ಧೋರಣೆಯನ್ನು ರಾಜ್ಯಗಳ ಮೇಲೆ ಹೇರುವ ಪ್ರಯತ್ನವೂ ಆಗಬಹುದು. ಇದು ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಭಾರತದ ಪ್ರಜಾಪ್ರಭುತ್ವದ ಆಧಾರವಾದ ಒಟ್ಟಾರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ.
–ಡಾ.ಕಿರಣ್ ಎಂ. ಗಾಜನೂರು, ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.