ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿ ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷ ಗಾದಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನೊಬ್ಬ ಹಿರಿಯ ಮುಖಂಡ ಜೆ.ಪಿ.ನಡ್ಡಾ ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ.
ಜುಲೈ 7ರಂದು ಶುರುವಾಗುವ ಸಂಸತ್ ಅಧಿವೇಶನಕ್ಕೆ ಮುನ್ನವೇ ಹೊಸ ಅಧ್ಯಕ್ಷರ ಆಯ್ಕೆಯನ್ನು ಪಕ್ಷ ಪ್ರಕಟಿಸುವ ಸಾಧ್ಯತೆ ಇದೆ.
‘ಮುಂದಿನ ನಾಲ್ಕರಿಂದ ಆರು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ವಿಜಯಕ್ಕೆ ಕಾರಣರಾಗಿರುವ ಅಮಿತ್ ಷಾ ಅವರನ್ನೇ ಮೋದಿ ಅವರು ಅಧ್ಯಕ್ಷ ಗಾದಿಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿಬರುತ್ತಿದೆ. ಉತ್ತರಪ್ರದೇಶದಲ್ಲಿ ಒಟ್ಟು 80 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ 71ರಲ್ಲಿ ಗೆಲುವು ಸಾಧಿಸಿದೆ.
‘ನಡ್ಡಾ ಅವರು ಸುಲಭವಾಗಿ ಕೈಗೆ ಸಿಗುತ್ತಾರೆ. ಹಾಗಾಗಿ ಇವರೇ ಅಧ್ಯಕ್ಷರಾದರೆ ಒಳ್ಳೆಯದು ಎನ್ನುವುದು ಪಕ್ಷದಲ್ಲಿ ಕೆಲವರ ಅನಿಸಿಕೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಷಾ ಅವರನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಬೇಕು ಎನ್ನುವುದು ಮೋದಿ ಅವರ ಹಂಬಲ. ಆದರೆ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣವು ಷಾ ಹಾದಿಗೆ ಮುಳ್ಳಾಗಬಹುದು’ ಎಂದೂ ಮೂಲಗಳು ಹೇಳಿವೆ.
ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮತ್ತಿತರ ನಾಯಕರು ಮೋದಿ
ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆದರೂ, ಅಂತಿಮವಾಗಿ ಆರೆಸ್ಸೆಸ್ ಅಭಿಪ್ರಾಯವೇ ಮುಖ್ಯವಾಗಬಹುದು ಎನ್ನಲಾಗಿದೆ.
ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಜಮ್ಮು–ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಕೂಡ ಷಾ ಅವರ ಸಂಘಟನಾ ಚಾತುರ್ಯವನ್ನು ಬಳಸಿಕೊಳ್ಳಬೇಕು ಎನ್ನುವುದು ಪಕ್ಷದ ಉದ್ದೇಶವಾಗಿದೆ. ಅಲ್ಲದೇ ಉತ್ತರಪ್ರದೇಶದಲ್ಲಿ ತನ್ನ ಬೇರುಗಳನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಆಲೋಚನೆ ಕೂಡ ಪಕ್ಷಕ್ಕಿದೆ.