ರಾಜ್ಯದ ಎಂಟು ಅಧಿಕಾರಿಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾವಣೆ ಮಾಡಲಾಗದು ಎಂದು ಸವಾಲು ಎಸೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಡೆಗೂ ತಮ್ಮ ಪಟ್ಟು ಸಡಿಲಿಸಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಜಾರಿ ಮಾಡಿದ್ದಾರೆ.
ಈ ವಿಚಾರದಲ್ಲಿ, ಚುನಾವಣಾ ಆಯೋಗದ ಮೇಲೆ ಮಮತಾ ಬ್ಯಾನರ್ಜಿ ಅವರ ವಾಗ್ದಾಳಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವಂತಹ ಸ್ಥಿತಿ ತಂದೊಡ್ಡಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಆಯೋಗದ ನಿರ್ಧಾರಕ್ಕೆ ಪ್ರತಿಭಟನೆ ತೋರುವ ಮೂಲಕ ಅನಗತ್ಯ ವಿವಾದವನ್ನು ಮಮತಾ ಬ್ಯಾನರ್ಜಿ ಅವರು ಸೃಷ್ಟಿಸಿದ್ದು ಅನಪೇಕ್ಷಣೀಯ.
ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆ ಕಾಯ್ದುಕೊಳ್ಳುವುದಕ್ಕಾಗಿ ಇಂತಹ ಕ್ರಮಗಳನ್ನು ಕೈಗೊಳ್ಳಲು ಸಂವಿಧಾನದ 324ನೇ ವಿಧಿ ಅನ್ವಯ ಚುನಾವಣಾ ಆಯೋಗಕ್ಕೆ ಪರಮಾಧಿಕಾರ ಇದ್ದೇ ಇದೆ ಎಂಬುದು ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರಿಗೆ ತಿಳಿದಿರಬೇಕಿತ್ತು. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಆಯೋಗಕ್ಕೆ ನೀಡಲಾಗಿರುವ ಸ್ವಾತಂತ್ರ್ಯದ ಮೇಲೆ ಮಿತಿ ಹೇರಲಾಗದು.
ಹಾಗಾದಾಗ ಚುನಾವಣೆ ಪ್ರಕ್ರಿಯೆಯಲ್ಲಿರಬೇಕಾದ ಮುಕ್ತತೆ, ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಕಳೆದ ವರ್ಷವೂ ಇದೇ ಸಮಯದಲ್ಲೇ ಪಂಚಾಯಿತಿ ಚುನಾವಣೆಗಳ ದಿನಾಂಕ ನಿಗದಿ ಹಾಗೂ ಚುನಾವಣೆಗಳಿಗಾಗಿ ಕೇಂದ್ರೀಯ ಅರೆಸೇನಾ ಪಡೆಗಳ ನಿಯೋಜನೆ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಜೊತೆ ಮಮತಾ ಬ್ಯಾನರ್ಜಿ ಸಂಘರ್ಷಕ್ಕೆ ಇಳಿದಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.
ಆಗ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಬ್ಯಾನರ್ಜಿ ಅವರನ್ನು ತಣ್ಣಗಾಗಿಸಿತ್ತು. ಈಗಲೂ, ತನ್ನ ವಿರೋಧಿಗಳ ಪಿತೂರಿಗೆ ಚುನಾವಣಾ ಆಯೋಗ ಮಣಿದಿದೆ ಎಂಬಂತಹ ಮಮತಾ ಬ್ಯಾನರ್ಜಿಯವರ ಆರೋಪಗಳು ಅತಿರೇಕದ್ದು. ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕದ್ದಲ್ಲ.
ಅಧಿಕಾರಿಗಳ ವರ್ಗಾವಣೆ ಆಗಬೇಕೆಂಬ ಬಗ್ಗೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕಿರುವ ಹೊಣೆ ಹೊತ್ತಿರುವ ಚುನಾವಣಾ ಆಯೋಗಕ್ಕೆ ಬಲವಾದ ಕಾರಣಗಳು ಇದ್ದಲ್ಲಿ ಅದನ್ನು ಗೌರವಿಸಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಆಡಳಿತ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪೂರ್ವಗ್ರಹಗಳನ್ನು ಈ ಅಧಿಕಾರಿಗಳು ಹೊಂದಿದ್ದಾರೆ ಎಂಬಂತಹ ದೂರುಗಳಿಂದಾಗಿ ವರ್ಗಾವಣೆಗೆ ನಿರ್ದೇಶನಗಳನ್ನು ಚುನಾವಣಾ ಆಯೋಗ ನೀಡಿತ್ತು.
ಎಲ್ಲ ಬಗೆಯ ಪೂರ್ವಗ್ರಹ ಮುಕ್ತ ವಾತಾವರಣದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವೇ ಆಗಿದೆ ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳುವುದು ಅವಶ್ಯ. ಬಹುಹಂತದ ಚುನಾವಣೆಗಳು ರಾಷ್ಟ್ರದಲ್ಲಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ನಡುವಣ ಕಿತ್ತಾಟ ವಾತಾವರಣವನ್ನು ಹದಗೆಡಿಸುವಂತಹದ್ದು.
ಲೋಕಸಭೆ ಚುನಾವಣೆ ನಂತರ ರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಆಶಯ ಹೊಂದಿರುವ ಮಮತಾ ಬ್ಯಾನರ್ಜಿ ಅವರು ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದನ್ನು ಮೊದಲು ಕಲಿತುಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.