ಬೆಂಗಳೂರು: ನಗರದಲ್ಲಿ ಅನಧಿಕೃತ ಮತ್ತು ನಿಗದಿತ ಶಬ್ದಮಿತಿಯನ್ನು ಮೀರಿ ಬಳಸಲಾಗುತ್ತಿರುವ ಧ್ವನಿವರ್ಧಕಗಳನ್ನು ಪತ್ತೆ ಹಚ್ಚುತ್ತೀರೋ ಅಥವಾ ಕೋರ್ಟೇ ಇದಕ್ಕೆ ನಿರ್ದೇಶನ ನೀಡಬೇಕೊ ಎಂದು ಹೈಕೋರ್ಟ್ ಪೊಲೀಸರನ್ನು ಪ್ರಶ್ನಿಸಿದೆ.
ಈ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರಿದ್ದ ವಿಭಾಗೀಯ ಪೀಠವು ಗುರುವಾರ ವಿಚಾರಣೆ ನಡೆಸಿತು. ನಗರದ ವಿವಿಧೆಡೆ ಧ್ವನಿವರ್ಧಕ ಗಳನ್ನು ಬೇಕಾಬಿಟ್ಟಿ ಬಳಕೆ ಮಾಡಲಾ ಗುತ್ತಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ ಎಂದು ಮಂಡಳಿಯ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠವು, ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮೌಖಿಕವಾಗಿ ತಾಕೀತು ಮಾಡಿದೆ. ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಲಾಗಿದೆ.
ವಿವರ ಸಲ್ಲಿಕೆಗೆ ಸೂಚನೆ
ರಾಜ್ಯಪಾಲರ ಕಚೇರಿಗೆ ಸಲ್ಲಿಸ ಲಾಗಿರುವ ಐವರು ವಿಧಾನ ಪರಿಷತ್ ಸದಸ್ಯರ ವಿವರಗಳನ್ನು ನೀಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಕುರಿತಂತೆ ಎಸ್.ರಾಜೇಂದ್ರನ್ ಅವರು ಸಲ್ಲಿಸಿರುವ ಕೊ ವಾರಂಟೊ (ಅರ್ಹತೆ ಇಲ್ಲದೆ ಸರ್ಕಾರಿ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿಯನ್ನು ಆ ಸ್ಥಾನದಿಂದ ತೆಗೆದು ಹಾಕಲು ಕೋರುವ) ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರು ಗುರುವಾರ ವಿಚಾರಣೆ ನಡೆಸಿದರು.
‘ಅರ್ಜಿದಾರರು ಎತ್ತಿರುವ ಸಾಂವಿ ಧಾನಿಕ ಪ್ರಶ್ನೆಗಳು ಗಂಭೀರವಾಗಿವೆ. ಆದ್ದರಿಂದ ಸರ್ಕಾರ ಈ ಕುರಿತಂತೆ ಆಕ್ಷೇಪಣೆ ಸಲ್ಲಿಸಬೇಕು’ ಎಂದು ಪೀಠವು ಹೇಳಿದೆ. 2014ರ ಜೂನ್ ತಿಂಗಳ 24ರಂದು ವಿ.ಎಸ್.ಉಗ್ರಪ್ಪ, ಕೆ.ಅಬ್ದುಲ್ ಜಬ್ಬಾರ್, ಜಯಮಾಲಾ ರಾಮಚಂದ್ರ, ಐವನ್ ಡಿಸೋಜಾ ಮತ್ತು ಇಕ್ಬಾಲ್ ಅಹಮದ್ ಸರಡಗಿ ಅವರನ್ನು ವಿಧಾನ ಪರಿಷತ್ಗೆ ನಾಮಕರಣ ಮಾಡಲಾಗಿದೆ. ಇದು ಸಂವಿಧಾನಬಾಹಿರ. ಇವರ ನಾಮಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.