ಜೈಪುರ (ಪಿಟಿಐ): ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋಟಾರ್ ಸೈಕಲ್ಗಳನ್ನು ಸಾಗಿಸುತ್ತಿದ್ದ ಲಾರಿಗೆ ರಾಸಾಯನಿಕ ಅನಿಲ ತುಂಬಿದ್ದ ಟ್ಯಾಂಕರ್ ಡಿಕ್ಕಿಯಾಗಿ ಕೆಳಗೆ ಬಿದ್ದು ಸ್ಫೋಟಿಸಿದ ಪರಿಣಾಮ ಕನಿಷ್ಠ 10 ಜನರು ಸಜೀವ ದಹನವಾಗಿದ್ದು, ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಫೋಟದಿಂದ ಭಾರಿ ಬೆಂಕಿ ಹತ್ತಿಕೊಂಡ ಕಾರಣ ಅದೇ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ದೆಹಲಿ-ಜೈಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಇತರ ಒಂಬತ್ತಕ್ಕೂ ಹೆಚ್ಚು ವಾಹನಗಳು ಅಗ್ನಿಗಾಹುತಿಯಾಗಿವೆ. ಶನಿವಾರ ರಾತ್ರಿ ಸಂಭವಿಸಿದ ಈ ಅಪಘಾತದಿಂದ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆವರೆಗೂ ವಾಹನ ಸಂಚಾರ ಸ್ಥಗಿತವಾಗಿತ್ತು. ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ವಾಹನಗಳು ಮಧ್ಯಾಹ್ನದವರೆಗೂ ಶ್ರಮಿಸಿವೆ.
ಈ ಟ್ಯಾಂಕರ್ನಲ್ಲಿ ಕೃತಕ ರಬ್ಬರಿನ ತಯಾರಿಕೆಗೆ ಬಳಸುವ ಬ್ಯೂಟಡಿಯೀನ್ ಹೆಸರಿನ ರಾಸಾಯನಿಕ ಅನಿಲವನ್ನು ತುಂಬಿ ಸಾಗಿಸಲಾಗುತ್ತಿತ್ತು. ಈ ಟ್ಯಾಂಕರ್ ಮತ್ತು ಬೈಕ್ ತುಂಬಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕೆಳಗೆ ಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಇದರಿಂದ ಚೂರುಗಳು ಹಾರಿ, ಒಂದು ಮಾರುತಿ ಕಾರು, ಪ್ರತ್ಯೇಕ ಅನಿಲ ಮತ್ತು ಸಾಸಿವೆ ಎಣ್ಣೆ ತುಂಬಿದ್ದ ಎರಡು ಟ್ಯಾಂಕರ್ಗಳು ಹಾಗೂ ಇತರ ಆರು ಲಾರಿಗಳು ಸಹ ಬೆಂಕಿಗಾಹುತಿಯಾಗಿವೆ. ಜತೆಗೆ ಹೆದ್ದಾರಿ ಪಕ್ಕದ ದೇವಾಲಯ ಮತ್ತು ಅಂಗಡಿಗೂ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಕುನಾಲ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಲ್ಲಿನ ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರಲ್ಲಿ ಕೆಲವರನ್ನು ಗುರುತಿಸಲಾಗದಷ್ಟು ಕರಕಲಾಗಿದ್ದು ಆರು ಶವಗಳನ್ನು ಮಾತ್ರ ಗುರುತಿಸಲಾಗಿದೆ. ಅಪಘಾತಕ್ಕೀಡಾದ ಟ್ಯಾಂಕರ್ ಮಾಲೀಕತ್ವ ಸಂಸ್ಥೆ, ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ದಾಸ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.