ಯಾದಗಿರಿ: ಸ್ವಾಭಿಮಾನದ ಬದುಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಯಶಸ್ಸು ತಾನಾಗಿಯೇ ಲಭಿಸುತ್ತದೆ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿದರು.
ನಗರದ ವಿಶ್ವಕರ್ಮ ಏಕದಂಡಗಿ ಮಠದಲ್ಲಿ ಸೋಮವಾರ ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಮಾಣಿಕ ಪ್ರಯತ್ನದ ಮೂಲಕ ಸಂಘಟಿತ ಹೋರಾಟದಿಂದ ಸೂಕ್ತ ಸ್ಥಾನಮಾನ ಪಡೆಯಬಹುದು. ಯಾವುದೇ ಸಮಾಜ ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಬೇಕಾದರೆ, ಸಮಾಜದ ಸಂಘಟನೆ ಅತ್ಯವಶ್ಯಕ. ಸಂಘಟನೆಯ ಮೂಲಕ ಸೂಕ್ತ ಸ್ಥಾನಮಾನ ಪಡೆಯಬಹುದಾಗಿದೆ ಎಂದರು.
ಭಗವಂತನ ಪ್ರೇರಣೆ ಇದ್ದರೆ ಎಲ್ಲ ಕನಸು ಈಡೇರುತ್ತವೆ. ವಿಶ್ವಕರ್ಮ ಭಗವಂತನ ಅನುಗ್ರಹ ನಿಮ್ಮ ಸಮಾಜದ ಮೇಲಿದೆ. ಏಕದಂಡಗಿ ಮಠದ ಶ್ರೀಗಳು ಮಹಾಜ್ಞಾನಿಗಳಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಮಾಜ ಏಳಿಗೆಗೆ ಶ್ರಮಿಸಿರಿ ಎಂದು ಸಲಹೆ ನೀಡಿದರು.ಮಹಾತ್ಮರ ಸನ್ನಿಧಾನದಲ್ಲಿ ದರ್ಶನ ಭಾಗ್ಯ ಪಡೆದರೆ ಜೀವನ ಸಾರ್ಥಕ ಆಗುತ್ತದೆ. ಜ್ಞಾನವು ಜೀವನದ ಅವಿಭಾಜ್ಯ ಅಂಗ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಶಿಲ್ಪಕಲೆ ಅಕಾಡೆಮಿ ಅಧ್ಯಕ್ಷ ಮಹಾದೇವಪ್ಪ ಶಿಲ್ಪಿ ಅವರಿಗೆ ಅಭಿನವ ಜಕಣಾಚಾರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮಠದ ಪೀಠಾಧಿಪತಿ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿದಾನಂದಪ್ಪ ಕಾಳೆಬೆಳಗುಂದಿ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಉಪಾಧ್ಯಕ್ಷ ರಾಚಮ್ಮ ಅನಪೂರ, ನಗರಸಭೆ ಸದಸ್ಯೆ ನಾಗರತ್ನಾ ಅನಪೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರವಿ ಮಾಲಿಪಾಟೀಲ, ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಸವರಾಜಪ್ಪ ವಿಶ್ವಕರ್ಮ, ವಿಶ್ವಕರ್ಮ ಸಮಾಜ ಅಧ್ಯಕ್ಷ ಎಂ. ಸಕ್ರೆಪ್ಪ ಮಾಮನಿ, ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರು, ಕಾಂತಿಲಾಲ್ ಶರ್ಮಾ ಮುಂತಾದವರು ವೇದಿಕೆಯಲ್ಲಿದ್ದರು.ಉಪನ್ಯಾಸಕ ವಿಶ್ವಕರ್ಮ ಸ್ವಾಗತಿಸಿ, ನಿರೂಪಿಸಿದರು.