ಬೆಂಗಳೂರು ನಗರ ಎಲ್ಲಾ ದಿಕ್ಕುಗಳಲ್ಲಿ ಯದ್ವಾತದ್ವಾ ಬೆಳೆಯುತ್ತಿದೆ. ಇದೇ ವೇಗದಲ್ಲಿ ಬೆಳೆದರೆ ಜನರ ಪರಿಸ್ಥಿತಿ ಏನಾಗಬಹುದೆಂದು ಊಹಿಸಲಾಗುತ್ತಿಲ್ಲ. ಕೆಂಪೇಗೌಡರು ಬೆಂಗಳೂರನ್ನು ಪ್ರತಿಷ್ಠಾಪಿಸಿ ಎಲ್ಲಾ ದಿಕ್ಕುಗಳಲ್ಲಿ ಗುರುತಿನ ಗೋಪುರಗಳನ್ನು ಕಟ್ಟಿಸಿದ್ದಾರೆ. ಅವರ ಉದ್ದೇಶ ಬೆಂಗಳೂರು ಈ ಗೋಪುರಗಳ ಆಚೆಗೆ ಬೆಳೆಯಬಾರದೆಂದೋ, ಗೋಪುರಗಳವರೆಗೆ ಪಟ್ಟಣ ಬೆಳೆದರೆ ಸಾಕೆಂಬ ಉದ್ದೇಶವಿತ್ತೋ ಅರ್ಥವಾಗುತ್ತಿಲ್ಲ.
ಇಂದಿನ ಬೆಂಗಳೂರಿನ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಪರಿಣಾಮ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಮನೆಗಳಲ್ಲಿ ಉತ್ಪತ್ತಿಯಾದ ಕಸವನ್ನು ಸಾಗಿಸಲು ತೊಂದರೆಯಾಗುತ್ತಿದೆ. ಹೊಲ ಗದ್ದೆಗಳು ಮಾಯವಾಗುತ್ತಿವೆ. ಜಮೀನು ಮಾರಿದ ರೈತರು ಅದರಿಂದ ಬಂದ ಹಣವನ್ನು ಬೇಕಾಬಿಟ್ಟಿ ವಿನಿಯೋಗಿಸಿ ಭಿಕಾರಿಯಾಗುತ್ತಿದ್ದಾರೆ. ಸುತ್ತಮುತ್ತ ಇರುವ ಜಿಲ್ಲೆಗಳ ರೈತರು ವ್ಯವಸಾಯವನ್ನು ಬಿಟ್ಟು ಪಟ್ಟಣದಲ್ಲಿ ಕೆಲಸಕ್ಕೆ ಸೇರಿ ಸರಿಯಾದ ಮನೆಮಠವಿಲ್ಲದೆ ಪರದಾಡುತ್ತಿದ್ದಾರೆ. ನಗರದಲ್ಲಿ ಬಸ್ಸುಗಳ ಸಂಚಾರಕ್ಕೆ ತಕ್ಕ ರಸ್ತೆಗಳಿಲ್ಲದೆ ಸಂಚಾರ ವ್ಯವಸ್ಥೆ ಅಧೋಗತಿಗಿಳಿಯುತ್ತಿದೆ.
ಲ್ಯಾಂಡ್ ಡೆವೆಲಪರ್ಗಳ ಕೈಗೆ ಸಿಕ್ಕ ರೈತರು ತಮ್ಮ ಭೂಮಿ, ಮನೆ ಮಠಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆರೆಗಳು ನಾಶವಾಗುತ್ತಿವೆ, ಸಾವಿರಕ್ಕೂ ಅಧಿಕ ಹಳ್ಳಿಗಳನ್ನು ಬೆಂಗಳೂರು ನುಂಗಿದೆ ಎಂದು ಹೇಳಲಾಗುತ್ತದೆ.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಬೇರೆ ಜಿಲ್ಲಾ ಮತ್ತು ತಾಲ್ಲೂಕು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಕೈಗಾರಿಕೆ, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಿ. ಎಲ್ಲಾ ಜಿಲ್ಲಾ ಸ್ಥಳಗಳಲ್ಲಿ ಅಲ್ಲಿಯ ಅನುಕೂಲಕ್ಕೆ ತಕ್ಕಂತೆ ಅಲ್ಲಿಯ ಜನರಿಗೆ ಅಲ್ಲೇ ಉದ್ಯೋಗ ಸಿಗುವಂತಾಗಲಿ.