ಕುಣಿಗಲ್: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟ ವೃದ್ಧೆಯೊಬ್ಬರ ಶವ ಸಂಸ್ಕಾರ ನೆರವೇರಿಸಲು ಆಕೆಯ ಗಂಡು ಮಕ್ಕಳು ನಿರಾಕರಿಸಿದರು. ದಿಕ್ಕು ತೋಚದ ಸ್ಥಿತಿಯಲ್ಲಿದ್ದ ಮಗಳಿಗೆ ಪಟ್ಟಣದ ನಾಲ್ವರು ಯುವಕರು ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದರು.
ಅಮೃತೂರು ಹೋಬಳಿ ಕುಪ್ಪೆ ಗ್ರಾಮದ ಹುಚ್ಚಮ್ಮ (72) ಮೃತ ಮಹಿಳೆ. ಇವರ ಪತಿ ಹುಚ್ಚಯ್ಯ ಶಿಕ್ಷಕ ವೃತ್ತಿಯಲ್ಲಿದ್ದು, ಅಮೃತೂರು ಹೋಬಳಿಯ ಹೊಳಗೆರೆಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದರು. 20 ವರ್ಷದ ಹಿಂದೆ ಮೃತಪಟ್ಟರು. ಹುಚ್ಚಮ್ಮ ಅವರ 4 ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಅಂಗವಿಕಲ ಪುತ್ರಿ ಸರಸ್ವತಿ ತಾಯಿಯ ಜವಾಬ್ದಾರಿ ಹೊತ್ತಿದ್ದರು.
ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬಂದ ಹುಚ್ಚಮ್ಮ ಅಲ್ಲಿಯೇ ಮೃತಪಟ್ಟರು. ತಾಯಿಯ ಶವ ಸಾಗಿಸುವ ಬಗೆ ಅರಿಯದೆ ಗೋಳಾಡುತ್ತಿದ್ದ ಸರಸ್ವತಿಯ ನೆರವಿಗೆ ಬಂದ ಭಗತ್ಕ್ರಾಂತಿ ಸೇನೆಯ ಮಂಜುನಾಥ್, ಶಂಕರ್, ಶಂಕರ್ ನಾಯಕ್ ವೃದ್ಧೆಯ ಮಕ್ಕಳನ್ನು ಸಂಪರ್ಕಿಸಿದರು. ಮಕ್ಕಳು ಬರಲು ನಿರಾಕರಿಸಿ, ಏನನ್ನಾದರೂ ಮಾಡಿಕೊಳ್ಳಿ ಎಂದರು.
ಗ್ರಾಮಸ್ಥರಿಗೆ ಈ ವಿಷಯ ತಿಳಿಸಿದಾಗ, ಹೇಗಾದರೂ ಮಾಡಿ ಶವವನ್ನು ಗ್ರಾಮಕ್ಕೆ ತಲುಪಿಸಿ ಎಂಬ ವಿನಂತಿ ಬಂತು. ಹೇಮಂತ್ ಎಂಬ ಟೆಂಪೊ ಚಾಲಕನ ನೆರವಿನೊಂದಿಗೆ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಯುವಕರ ಮಾನವೀಯತೆ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.