ಬೆಂಗಳೂರು: ಸ್ಥಿರಾಸ್ತಿಯ ಆನ್ಲೈನ್ ನೋಂದಣಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾ ಮಾಡಿದ್ದು ಅರ್ಜಿದಾರರಿಗೆ ₨ 50 ಸಾವಿರ ದಂಡ ವಿಧಿಸಿದೆ.
ಈ ಕುರಿತು ಬೆಂಗಳೂರಿನ ನಿವಾಸಿ ಎ.ರಾಜಶೇಖರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ಪಿ.ಬಿ. ಬಜಂತ್ರಿ ಅವರಿದ್ದ ವಿಭಾಗೀಯ ಪೀಠವು ವಿಲೇವಾರಿ ಮಾಡಿತು.
‘ಸ್ಥಿರಾಸ್ತಿಗಳ ಆನ್ಲೈನ್ ನೋಂದಣಿಗಾಗಿ ರಾಜ್ಯ ಸರ್ಕಾರವು 2011ರಲ್ಲಿ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಈ ವ್ಯವಸ್ಥೆಯಿಂದ ನೋಂದಣಿ ಪುನರಾರ್ತನೆ ಆಗುವ ಸಂಭವ ಇರುತ್ತದೆ’ ಎಂಬ ಅರ್ಜಿದಾರರ ವಾದವನ್ನು ಪ್ರಧಾನ ಸರ್ಕಾರಿ ವಕೀಲ ಆರ್.ದೇವದಾಸ್ ಅಲ್ಲಗಳೆದರು.
‘ಈ ವ್ಯವಸ್ಥೆಯಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಿಲ್ಲ. ಆದಾಗ್ಯೂ ಈ ಪದ್ಧತಿ ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂಬ ಏಕಮೇವ ಉದ್ದೇಶದಿಂದಲೇ ರೂಪುಗೊಂಡಿದೆ’ ಎಂದು ದೇವದಾಸ್ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಈ ಪ್ರಕರಣದಲ್ಲಿ ಮಧ್ಯಾಂತರ ಅರ್ಜಿ ಸಲ್ಲಿಸಿ ಪ್ರತಿವಾದಿಯಾಗಿದ್ದ ವಕೀಲರಾದ ಎನ್.ಪಿ.ಅಮೃತೇಶ್ ಅವರು, ‘ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ಹಿಂದೆ ಹಲವು ಪಟ್ಟಭದ್ರ ನೋಂದಣಿ ಅಧಿಕಾರಿಗಳ ಕುಮ್ಮಕ್ಕಿದೆ. ಆನ್ಲೈನ್ ನೋಂದಣಿ ವ್ಯವಸ್ಥೆ ಮುಂದುವರಿಯಬೇಕು’ ಎಂದು ಪ್ರತಿಪಾದಿಸಿದರು.