ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾವಲೋಕನ ಅಗತ್ಯ

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅಧ್ಯಾಪ­ಕರ ಬೋಧನಾ ಅವಧಿಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಹೊರ­ಡಿ­ಸಿರುವ ಸುತ್ತೋಲೆ, ಉನ್ನತ ಶಿಕ್ಷಣ ವಲಯದಲ್ಲಿ ಚರ್ಚೆಗೆ ಎಡೆ­ಮಾಡಿಕೊಟ್ಟಿದೆ.  ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ)  ನಿಯಮಾನುಸಾರ ಪ್ರಥಮ ದರ್ಜೆ ಕಾಲೇಜುಗಳ  ಅಧ್ಯಾಪಕರು ವಾರಕ್ಕೆ 16 ಗಂಟೆ ಬೋಧನೆ ಮಾಡಬೇಕು ಮತ್ತು 6 ಗಂಟೆ ಸಂಶೋಧನೆಯಲ್ಲಿ ತೊಡ­ಗಬೇಕು.

ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿರದವರು ಅದಕ್ಕೆ ನಿಗದಿಯಾದ ಅವಧಿಯನ್ನು  ಬೋಧನೆಗೆ ಬಳಸಲಿ ಎಂಬುದು ಸರ್ಕಾರದ ಸುತ್ತೋಲೆಯ ಹಿಂದಿರುವ ಆಶಯ. ಇಲ್ಲಿರುವ ತರ್ಕವನ್ನು ಅಲ್ಲಗಳೆಯ­ಲಾ­ಗದು. ಬೋಧನಾ ಅವಧಿ ಕಡಿಮೆ ಆಗಬೇಕು ಎಂದಾದಲ್ಲಿ ಸಂಶೋ­ಧನೆ­ಯಲ್ಲಿ ತೊಡಗಿಕೊಳ್ಳುವ ಬದ್ಧತೆಯನ್ನು ಅಧ್ಯಾಪಕರು ಪ್ರದರ್ಶಿಸಬೇಕಿದೆ.  ಬೋಧನಾ ಅವಧಿಯ ಹೆಚ್ಚಳ ಅಂದರೆ ಒಟ್ಟು ಕೆಲಸದ ಅವಧಿಯ ಹೆಚ್ಚಳ ಎಂದೇನೂ ಅರ್ಥವಲ್ಲ.

ಕಾಲೇಜಿನಲ್ಲಿ ಇರುವ ಸಮಯದಲ್ಲೇ ಪ್ರತಿ ದಿನ ಇನ್ನೊಂದು ತಾಸು ಹೆಚ್ಚಿಗೆ ತರಗತಿಯಲ್ಲಿ ಪಾಠ ಹೇಳಬೇಕಾಗುತ್ತದೆ. ಆದರೆ ಬಹುಪಾಲು ಅಧ್ಯಾಪಕರು ಇದನ್ನು ‘ಹೊರೆ’ ಎಂದು ಭಾವಿಸಿದಂತಿದೆ.   ಇದು ಆಡಳಿತಾತ್ಮಕ ನಿರ್ಧಾರವೇ ಹೊರತು, ಬೋಧನಾ ಸಾಮರ್ಥ್ಯ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಶೈಕ್ಷಣಿಕ ವಾಸ್ತವಗಳನ್ನು ಒರೆಗೆ ಹಚ್ಚಿ ತೆಗೆದುಕೊಂಡ ತೀರ್ಮಾನವಲ್ಲ ಎಂಬುದು ಪ್ರಾಧ್ಯಾಪಕರ ಅಭಿಮತ.  ವಾಸ್ತವವಾಗಿ ನಿಯಮಾವಳಿ ಪ್ರಕಾರ ಸಂಶೋಧನೆಯಲ್ಲಿ ಅಧ್ಯಾಪಕರು  ತೊಡಗಿಕೊಳ್ಳದೇ ಇದ್ದಲ್ಲಿ ಆಗುವ 6 ಗಂಟೆಗಳ ನಷ್ಟವನ್ನು ತುಂಬುವುದು ಹೇಗೆ ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.

ಬೋಧನಾ ಅವಧಿ ಹೆಚ್ಚಳದ ಸುತ್ತ ರೂಪುಗೊಂಡಿರುವ ಸಾರ್ವಜನಿಕ ಚರ್ಚೆ ಮೂಲ ವಿಷಯವನ್ನು ಬಿಟ್ಟು ಬೇರೆ ವಿಚಾರಗಳನ್ನೂ ಚರ್ಚೆಯ ಮುನ್ನೆಲೆಗೆ ತಂದಿದೆ. ಸರ್ಕಾರ ಆರ್ಥಿಕ ಹೊರೆ ಇಳಿಸಿಕೊಳ್ಳಲು ಈ ಕ್ರಮ ಕೈಗೊಂಡಿದೆ; ಇದರಿಂದ ಅತಿಥಿ ಉಪನ್ಯಾಸಕರು ಕೆಲಸ ಕಳೆದು­ಕೊಳ್ಳ­ಲಿದ್ದಾರೆ ಎಂಬಂಥ ವಾದಗಳನ್ನು ಮಂಡಿಸಲಾಗುತ್ತಿದೆ. ಅತಿಥಿ ಉಪನ್ಯಾಸ­ಕರ ಸಮಸ್ಯೆಗೆ ಬೇರೆ ಆಯಾಮವೇ ಇದೆ. ಅದನ್ನು ಇದರ ಜತೆ ತಳಕು ಹಾಕು­ವುದು ಉಚಿತವಲ್ಲ.

ಉನ್ನತ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬುದು ಸರ್ವವಿದಿತ. ಅದನ್ನು ಸರಿಪಡಿಸುವುದು ಹೇಗೆ? ಬೋಧನಾ ಕ್ರಮವನ್ನು ಮತ್ತಷ್ಟು ಉತ್ತಮಪಡಿಸುವುದು ಹೇಗೆ? ಎಂಬುದರ  ಕುರಿತು ಚಿಂತಿಸುವುದು ಇಂದಿನ ತುರ್ತು ಅಗತ್ಯ. ಗುಣಮಟ್ಟದ ಬೋಧನೆಗೆ ನಿರಂತರ ಕಲಿಕೆ ಅಗತ್ಯ. ಹೀಗಾಗಿ ಸಂಶೋಧನೆ ಮತ್ತು ಬೋಧನೆ ಬೇರೆ ಬೇರೆ ಅಲ್ಲವೇ ಅಲ್ಲ. ಕಲಿಸು­ವಿಕೆ ಯಾಂತ್ರಿಕವಾಗದಿರಲು ಅಧ್ಯಾಪಕರಲ್ಲಿ ಸಂಶೋಧನಾ ಮನಸ್ಸು  ಇರು­ವುದು ಅತ್ಯಗತ್ಯ.  ಅಧ್ಯಾಪಕರಿಗೆ ಈ ವಿಚಾರದಲ್ಲಿ ಬದ್ಧತೆ ಇರಬೇಕು. ಆದರೆ ನಮ್ಮ ಸಂಶೋಧನಾ ಪ್ರಬಂಧಗಳನ್ನು ನೋಡಿದರೆ ಬೋಧನಾ ಗುಣಮಟ್ಟ ಹೇಗಿದೆ ಎಂಬುದು ಮನವರಿಕೆಯಾಗುತ್ತದೆ.

ನಮ್ಮ ಶೈಕ್ಷಣಿಕ ವಾತಾವರಣ ಆರೋಗ್ಯಕರವಾಗಿಲ್ಲ. ಇದಕ್ಕೆ ಕಾರಣ ಯಾರು? ಇದರಲ್ಲಿ ಬೋಧಕರ ಪಾಲೆಷ್ಟು? ಉನ್ನತ ಶಿಕ್ಷಣ ಇಲಾಖೆಯ ಪಾಲೆಷ್ಟು? ಈ ಕುರಿತು ಆತ್ಮಾವ­ಲೋಕನ ಆಗಬೇಕಾಗಿದೆ. ಹಲವಾರು ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರ­ಗಳು ಇಲ್ಲ.  ಅದಕ್ಕೆ ಪೂರಕವಾದ ವಾತಾವರಣ ಮತ್ತು ಸೌಕರ್ಯ­ಗಳಿಲ್ಲ ಅಂತ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಎಷ್ಟು ಸರಿ? ಸೌಕರ್ಯ ಕೊರತೆಯೇ ಬೋಧನಾ ಅವಧಿ ಹೆಚ್ಚಿಸಲು ಕಾರಣ­ವಾಗಿ­ದ್ದರೆ ಅದನ್ನು ಒಪ್ಪಲಾಗದು. ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು, ಅಧ್ಯಾಪಕರ ಸಂಶೋಧನಾ ಸಾಮರ್ಥ್ಯ ಹೆಚ್ಚಿಸಲು ಬೇಕಾದ ಎಲ್ಲ ಉಪಕ್ರಮಗಳನ್ನೂ ಸರ್ಕಾರ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT