ಚಿಕ್ಕಬಳ್ಳಾಪುರ: ‘ಮನೆಗೆ ಆಧಾರಸ್ತಂಭವಾಗಿದ್ದ, ಆತನಿಂದಲೇ ಸಂಸಾರ ನಡೆಯುತ್ತಿತ್ತು. ಮನೆ ದೀಪವೇ ಆರಿ ಹೋದ ಮೇಲೆ ಇನ್ನೇನು ಉಳಿದಿದೆ? ಏನು ಮಾಡಬೇಕು ಅಂತ ದಿಕ್ಕು ತೋಚುತ್ತಿಲ್ಲ. ಮುದ್ದಿನಿಂದ ಸಾಕಿದ್ದ ದೊಡ್ಡ ಮಗನೇ ಹೋದ. ನಮ್ಮನ್ನು ನೋಡಿಕೊಳ್ಳುವವರು ಯಾರು?’
ಹೆಬ್ಬಾಳ ಸಮೀಪದ ಕೆಂಪಾಪುರ ಜಂಕ್ಷನ್ನಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿ.ಎಸ್.ಆನಂದ್ (27) ಮೃತಪಟ್ಟ ಸುದ್ದಿ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದೆ.
ತಾಲ್ಲೂಕಿನ ರೆಡ್ಡಗೊಲ್ಲಾರಹಳ್ಳಿ ಬಳಿಯ ಬಯ್ಯಪ್ಪನಹಳ್ಳಿ ಮನೆಯಲ್ಲಿ ಆತನ ತಂದೆ ಸಂಪಂಗಿರಾಮಯ್ಯ ದಿಕ್ಕು ತೋಚದಂತಾಗಿದ್ದಾರೆ. ಆನಂದ್ ಭಾವಚಿತ್ರದ ಪಕ್ಕ ಕೂತಿದ್ದ ಅವರಿಗೆ ಆಘಾತದಿಂದ ಮಾತಾಡಲು ಸಹ ಸಾಧ್ಯವಾಗುತ್ತಿಲ್ಲ. ಒಮ್ಮೆ ಮಗನ ಭಾವಚಿತ್ರ, ಮತ್ತೊಮ್ಮೆ ಮನೆ, ಇನ್ನೊಮ್ಮೆ ಬೀದಿಯತ್ತ ಏನನ್ನೋ ನಿರೀಕ್ಷಿಸುವಂತೆ ಕೂತಿದ್ದಾರೆ.
ಸಂಪಂಗಿರಾಮಯ್ಯ ಅವರ ಕಣ್ಣಲ್ಲಿ ನೋವಿನಿಂದ ನೀರು ಜಿನುಗುತ್ತಿದ್ದರೆ, ಕಣ್ಣೀರು ಹಾಕುತ್ತಿದ್ದ ಸಂಬಂಧಿಕರನ್ನು ಸಂತೈಸುವುದು ನೆರೆಹೊರೆಯವರಿಗೆ ಬಹಳ ಕಷ್ಟವಾಗಿತ್ತು. ‘ರೆಡ್ಡಗೊಲ್ಲಾರಹಳ್ಳಿ ಸರ್ಕಾರಿ ಶಾಲೆ-ಯಲ್ಲಿ ಓದಿದ ಆನಂದ್ ಬಾಗೇಪಲ್ಲಿಯಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದ. ಇಲ್ಲಿಯೇ ಕೆಲ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಆತ, ಚಿಕ್ಕಬಳ್ಳಾಪುರದಲ್ಲಿ ಸರ್ವೀಸ್ ಸೆಂಟರ್ ಆರಂಭಿಸಬೇಕು ಎಂದಿದ್ದ. ಆ ಬಗ್ಗೆ ಮಾತ-ನಾಡಲು ಬೆಂಗಳೂರಿಗೆ ಹೋಗಿದ್ದ. ಸಂಜೆ ಮನೆಗೆ ಮರಳುವುದಾಗಿ ಹೇಳಿದ್ದ. ಆದರೆ ಜೀವಂತವಾಗಿ ಬರಲಿಲ್ಲ’ ಎಂದು ಸಂಪಂಗಿರಾಮಯ್ಯ ಕಣ್ಣೀರಾದರು.
ಕುಟುಂಬದ ಹೊಣೆ ನಿರ್ವಹಿಸುತ್ತಿದ್ದ ಆನಂದ್ ಭವಿಷ್ಯದ ಬಗ್ಗೆ ಹಲ ಕನಸುಗಳನ್ನು ಕಟ್ಟಿದ್ದ. ಆರ್ಥಿಕ ಸಮಸ್ಯೆ ನೀಗಿಸಿಕೊಂಡು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದ. ಈಗ ಬದುಕಿಲ್ಲ ಎಂದರೆ ನಂಬಲು ಆಗುತ್ತಿಲ್ಲ ಎಂದು ಆನಂದ್ ಚಿಕ್ಕಮ್ಮ ವೆಂಕಟಲಕ್ಷ್ಮಮ್ಮ ಕಣ್ಣೀರು ಹಾಕಿದರು.
ಸ್ನೇಹಿತ ಸುಮಂತ್ ಜತೆ ಬೈಕ್ನಲ್ಲಿ ಕೂತಿದ್ದ ಆನಂದ್ ಸಿಗ್ನಲ್ ದೀಪವಿದ್ದ ಕಾರಣ ಅಲ್ಲಿ ನಿಲ್ಲಿಸಿದ್ದರು. ಆದರೆ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ, ಬೈಕ್ನಲ್ಲಿ ಕೂತಿದ್ದ ಅವರಿಬ್ಬರ ಮೇಲೆಯೂ ಚಲಿಸಿತು. ಸುಮಂತ್ಗೆ ತೀವ್ರವಾದ ಗಾಯಗಳಾದರೆ, ಆನಂದ್ ಸ್ಥಳದಲ್ಲೇ ಪ್ರಾಣಬಿಟ್ಟ. ಆತ ಮೃತಪಟ್ಟಿದ್ದಾನೆ ಎಂದು ಈಗಲೂ ನಂಬಲು ಆಗುತ್ತಿಲ್ಲ ಎಂದು ಆನಂದ್ ಸ್ನೇಹಿತ ವಿನಯ್ ತಿಳಿಸಿದರು.