ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜಾಹೀರಾತು ವಿಭಾಗದ ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರಿಂದಲೇ ಪ್ರೋತ್ಸಾಹ, ರಕ್ಷಣೆ ಸಿಗುತ್ತಿದೆ’ ಎಂದು ಬಿಬಿಎಂಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆಯುಕ್ತರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಕೈಗೊಂಡ ಯತ್ನಗಳ ಕುರಿತು ಲಕ್ಷ್ಮೀನಾರಾಯಣ ಅವರು ವಿವರಣೆ ನೀಡಿದರಾದರೂ ಸದಸ್ಯರು ಅದರಿಂದ ತೃಪ್ತರಾಗಲಿಲ್ಲ.
ಕಾಚರಕನಹಳ್ಳಿ ವಾರ್ಡ್ನ ಸದಸ್ಯ ಪದ್ಮನಾಭ ರೆಡ್ಡಿ ಅವರು ಜಾಹೀರಾತು ಫಲಕಗಳ ಬಗೆಗೆ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ ಇಡೀ ದಿನದ ಚರ್ಚೆಗೆ ನಾಂದಿಹಾಡಿತು. 2009–10ರಲ್ಲಿ 2,044 ಅಧಿಕೃತ ಜಾಹೀರಾತು ಫಲಕಗಳಿದ್ದವು. ಅವುಗಳ ಸಂಖ್ಯೆ ಈಗ 2,261ಕ್ಕೆ ಹೆಚ್ಚಾಗಿದೆ. ಅನಧಿಕೃತ ಫಲಕಗಳನ್ನು ತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಧಿಕಾರಿಗಳು ನೀಡಿದ ಈ ಅಂಕಿ–ಅಂಶಗಳಿಂದ ತೃಪ್ತರಾಗದ ಪದ್ಮನಾಭ ರೆಡ್ಡಿ, ‘ಅನಧಿಕೃತ ಜಾಹೀರಾತು ಫಲಕಗಳನ್ನು ತೆಗೆಯಲು ಅಧಿಕಾರಿಗಳಿಗೆ ಮನಸ್ಸಿಲ್ಲ. ಏಕೆಂದರೆ, ಅವರೆಲ್ಲ ಜಾಹೀರಾತು ಏಜೆನ್ಸಿಗಳ ಜತೆ ಶಾಮೀಲಾಗಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರು ಸಹ ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.
‘ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ನಗರದ ಎಲ್ಲ ರಸ್ತೆಗಳ ವಿಡಿಯೊ ಚಿತ್ರೀಕರಣ ಮಾಡಿಸಿ, 21 ಸಾವಿರ
ಜಾಹೀರಾತು ನಿಷೇಧ: ಇಂದು ತೀರ್ಮಾನ? |
---|
ನಗರದಲ್ಲಿ ಎಲ್ಲ ವಿಧದ ಜಾಹೀರಾತು ಫಲಕಗಳನ್ನು ನಿಷೇಧಿಸಲು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಬುಧವಾರದ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ನಿಲುವಳಿ ಮಂಡಿಸಲು ಆಡಳಿತ ಪಕ್ಷ ಚಿಂತಿಸಿದೆ. ನಿಲುವಳಿ ಮಂಡನೆಗೆ ಮೇಯರ್ ಒಪ್ಪಿಗೆ ಸೂಚಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ‘ಕತ್ತಲಲ್ಲಿ ಕರಡಿಗೆ ಜಾಮೂನು...’ |
|
ಅನಧಿಕೃತ ಜಾಹೀರಾತು ಫಲಕಗಳ ಕುರಿತು ದಾಖಲೆ ಒದಗಿಸಿದ್ದರು. ಆ ಎಲ್ಲ ಫಲಕಗಳನ್ನು ಹಾಕಿದವರಿಂದ ದಂಡ ವಸೂಲಿ ಮಾಡಿದ್ದರೆ ಬಿಬಿಎಂಪಿಗೆ ₨ 250 ಕೋಟಿಗೂ ಹೆಚ್ಚು ಆದಾಯ ಬರುತ್ತಿತ್ತು. ಅಧಿಕಾರಿಗಳು ಇದುವರೆಗೆ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
‘ಒಂದಕ್ಕೆ ಅನುಮತಿ ಪಡೆದು 3–4 ಫಲಕ ಅಳವಡಿಸುವುದು, ಚಿಕ್ಕ ಅಳತೆಗೆ ಅನುಮತಿ ಪಡೆದು ಬೃಹತ್ ಫಲಕ ಹಾಕುವುದು ಸೇರಿದಂತೆ ಹಲವು ವಿಧದ ಅಕ್ರಮ ನಡೆಸಿದರೂ ಸುಮ್ಮನಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಬಿ.ಎನ್. ಮಂಜುನಾಥ್ ರೆಡ್ಡಿ, ‘ಜಾಹೀರಾತು ವಿಭಾಗದ ಅಧಿಕಾರಿಗಳ ಕುಟುಂಬ ವರ್ಗದವರೇ ಜಾಹೀರಾತು ಏಜೆನ್ಸಿಗಳನ್ನು ನಡೆಸುತ್ತಿದ್ದು, ಅವರಿಂದಲೇ ಅಕ್ರಮಗಳು ನಡೆಯುತ್ತಿವೆ. ಬಿಬಿಎಂಪಿ ಮೇಲೆ ಜಾಹೀರಾತು ಮಾಫಿಯಾ ಹಿಡಿತ ಸಾಧಿಸಿದೆ’ ಎಂದು ದೂರಿದರು.
‘ಆಯುಕ್ತರ ಸೌಮ್ಯ ನಿಲುವಿನಿಂದ ಜಾಹೀರಾತು ವಿಭಾಗದಲ್ಲಿ ಹೊಲಸು ಹೆಚ್ಚಾಗಿದೆ. ಬಿಬಿಎಂಪಿ ವರಮಾನದ ಸೋರಿಕೆಗೆ ಕಾರಣರಾದ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.
ಸಿದ್ದಾಪುರ ವಾರ್ಡ್ನ ಸದಸ್ಯ ಎಂ.ಉದಯಶಂಕರ್, ‘ಅನಧಿಕೃತ ಜಾಹೀರಾತು ಫಲಕಗಳ ವಿಷಯವಾಗಿ ಆಯುಕ್ತರು ಹೈಕೋರ್ಟ್ನಲ್ಲಿ ಹಲವು ಸಲ ಮುಜುಗರಕ್ಕೆ ಒಳಗಾಗುವಂತಹ ಪ್ರಸಂಗಗಳು ನಡೆದಿವೆ. ಹೀಗಿದ್ದೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಅವರು ಚಾಟಿ ಬೀಸುತ್ತಿಲ್ಲ’ ಎಂದು ಹೇಳಿದರು.
‘ಫುಟ್ಪಾತ್ಗಳ ಮೇಲೆ ಜಾಹೀರಾತು ಸಂಸ್ಥೆಗಳಿಗೆ ಪ್ರಾಯೋಗಿಕವಾಗಿ 30 ಕುರ್ಚಿ ಹಾಕಲು ಕೌನ್ಸಿಲ್ ಅನುಮತಿ ನೀಡಿದರೆ, ಜಾಹೀರಾತು ಪ್ರದರ್ಶಿಸುವ ಸಾವಿರಾರು ಕುರ್ಚಿಗಳನ್ನು ನಗರದ ಎಲ್ಲೆಡೆ ಹಾಕಲಾಗಿದೆ. ಅದಕ್ಕೆ ಆಯುಕ್ತರು ಅನುಮತಿ ನೀಡಿದ್ದು ಏಕೆ’ ಎಂದು ಕೇಳಿದರು. ‘ಸೊಂಭೇರಿಗಳು ಕೂರುವ ಈ ಕುರ್ಚಿಗಳನ್ನು ಕಿತ್ತು ಹಾಕಬೇಕು’ ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ನಾಯಕ ರಮೇಶ್ ಹಾಗೂ ಜೆಡಿಎಸ್ ನಾಯಕ ಆರ್. ಪ್ರಕಾಶ್, ‘ನಮ್ಮ ಅಧಿಕಾರಿಗಳು ರಾಜಕಾಲುವೆ, ಸ್ಮಶಾನ ಮತ್ತು ಉದ್ಯಾನಗಳಲ್ಲೂ ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡಿದ್ದಾರೆ’ ಎಂದು ಕಿಡಿಕಾರಿದರು.
ನಾಗಪುರ ವಾರ್ಡ್ನ ಸದಸ್ಯ ಎಸ್.ಹರೀಶ್, ‘ಸುಸ್ತಿದಾರರಾಗಿ ಬಿಬಿಎಂಪಿಯಿಂದ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸಂಸ್ಥೆಗಳಿಗೆ ಜಾಹೀರಾತು ಫಲಕ ಹಾಕಲು ಅನುಮತಿ ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಎಲ್ಲ ಜಾಹೀರಾತು ಫಲಕಗಳಿಗೆ ಇ–ಹರಾಜು ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.
ಕಾಡು ಮಲ್ಲೇಶ್ವರ ವಾರ್ಡ್ನ ಜಿ.ಮಂಜುನಾಥರಾಜು, ‘ಕೆಂಪೇಗೌಡ ವಿಮಾನ ನಿಲ್ದಾಣ ಸಣ್ಣ ವಿಸ್ತಾರ ಹೊಂದಿದ್ದರೂ ಜಾಹೀರಾತಿನಿಂದ ವಾರ್ಷಿಕ ₨ 200 ಕೋಟಿ ವರಮಾನ ಗಳಿಸುತ್ತಿದೆ. ಬಿಬಿಎಂಪಿ 800 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಕೇವಲ ₨ 20 ಕೋಟಿ ವರಮಾನ ಬರುತ್ತಿದೆ. ಬಿಬಿಎಂಪಿಗೆ ಕೆಟ್ಟ ಹೆಸರು ತರುತ್ತಿರುವ ಜಾಹೀರಾತು ಫಲಕಗಳನ್ನೇ ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಸಲಹೆ ನೀಡಿದರು.
ಮಂಜುನಾಥರಾಜು ಅವರ ಈ ಸಲಹೆಗೆ ಹಲವು ಸದಸ್ಯರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದರು. ಆದರೆ, ಗುರಪ್ಪನಪಾಳ್ಯದ ಮಹ ಮದ್ ರಿಜ್ವಾನ್ ನವಾಬ್ ಹಾಗೂ ಪ್ರಕಾಶ್, ‘ದಂಡ ಕಟ್ಟಿಸಿಕೊಂಡು ಜಾಹೀರಾತು ಫಲಕಗಳನ್ನು ಸಕ್ರಮ ಮಾಡುವುದು ಒಳಿತು’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.